ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ‌ ಸೆರೆ

ಲೋಕಬಂಧು ನ್ಯೂಸ್ ಉಡುಪಿ, ಜು.19
ಶಿವಳ್ಳಿ ಗ್ರಾಮದ ಬುಡ್ನಾರ್‌ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ. ಪೌಡರ್‌, ಹೈಡ್ರೋಗಾಂಜಾ, ಎಂಡಿಎಂಎ ಟ್ಯಾಬ್ಲೆಟ್‌ ಹೊಂದಿದ್ದ ಹಾಗೂ ಕಾಪು, ಉಡುಪಿ, ಮಣಿಪಾಲ, ಕಾರ್ಕಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಉದ್ಯಾವರ ಪಿತ್ರೋಡಿ ನಿವಾಸಿ ವಿಜಯ ಪೂಜಾರಿ (36), ಕುಕ್ಕಂದೂರು ನಿವಾಸಿ ಪಿ.ಎ. ಮೊಹಮ್ಮದ್‌ ಸಮ್ಮಾಸ್‌ (24) ಮತ್ತು‌ ಮೀಯಾರು ನಿವಾಸಿ  ಆಕಾಶ್‌ ಶೆಟ್ಟಿ (20) ಎಂಬವರು 4 ಗ್ರಾಂ. ತೂಕದ ಎಂ.ಡಿ.ಎಂ.ಎ ಪೌಡರ್‌, 2.5 ಗ್ರಾಂ. ಹೈಡ್ರೋಗಾಂಜಾ, 3.65 ಗ್ರಾಂ., ಎಂ.ಡಿ.ಎಂ.ಎ ಟ್ಯಾಬ್ಲೆಟ್‌, 3 ಗ್ರಾಂ. ತೂಕದ ಗಾಂಜಾ ಹಾಗೂ ಸೊತ್ತುಗಳನ್ನು ಸಾಗಾಟಕ್ಕೆ ಬಳಸಿದ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 3.31 ಲಕ್ಷ ಎಂದು ಅಂದಾಜಿಸಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಮಾರ್ಗದರ್ಶನದಲ್ಲಿ  ಮಲ್ಪೆ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಡುಪಿ ಸಂಚಾರ ಠಾಣೆ ಪಿ.ಎಸ್.‌ಐ ಮಹೇಶ್‌ ಟಿ.ಎಂ., ಸೈಬರ್‌ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್‌, ಹಿರಿಯಡ್ಕ ಪೊಲೀಸ್‌ ಠಾಣೆಯ ಪ್ರವೀಣ್‌ ಶೆಟ್ಟಿಗಾರ್‌, ಮಲ್ಪೆ ವೃತ್ತ ಕಚೇರಿಯ ಇಂದ್ರೇಶ್, ಹನುಮಂತ ಅಸ್ಕಿ, ಮನು ಕುಮಾರ್‌, ರಶ್ಮಿ ಹೆಗಡೆ, ರವಿ ಕುಮಾರ್‌, ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಹಾಗೂ ದಿನೇಶ್‌ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.