ಬಂಟರ ಸಾಂಸ್ಕೃತಿಕ ಸಿರಿವಂತಿಕೆಯ ಪ್ರತಿಬಿಂಬ
Sunday, October 29, 2023
ಉಡುಪಿ, ಅ. 28 (ಲೋಕಬಂಧು ವಾರ್ತೆ): ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ವಿಶ್ವ ಬಂಟರ ಸಮ್ಮೇಳನ ಸಂದರ್ಭದಲ್ಲಿ ಆಯೋಜಿಸಲಾದ ಸಾಲಂಕೃತ ಮೆರವಣಿಗೆ ಬಂಟ ಸಮುದಾಯದ ಸಾಂಸ್ಕೃತಿಕ ಸಿರಿವಂತಿಕೆಯ ಪ್ರತಿಬಿಂಬವಾಗಿತ್ತು.
ಬೆಳಿಗ್ಗೆ ಬೋರ್ಡ್ ಹೈಸ್ಕೂಲ್ ಎದುರು ಸಾಲಂಕೃತ ಮೆರವಣಿಗೆಗೆ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಬಾರ್ಕೂರು ಭಾರ್ಗವ ಮಹಾಸಂಸ್ಥಾನದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರಿದ್ದರು.
ಕಂಬಳದ ಕೋಣಗಳನ್ನು ಹಿಡಿದು ಸಾಗಿದ ಕಂಬಳ ಓಟಗಾರರು ಗಮನ ಸೆಳೆದರು.
ಕಡೆಗೋಲು ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದೇವರ ಸ್ಥಬ್ಧಚಿತ್ರಗಳು, ಚೆಂಡೆ, ಕೀಲುಕುದುರೆ, ಕೇರಳದ ಥೈಯಂ, ಹುಲಿವೇಷ, ಬ್ಯಾಂಡ್ ಸೆಟ್, ಡೋಲು, ವಾದ್ಯ, ನಾದಸ್ವರ, ವೇಷಧಾರಿಗಳು ಗಮನ ಸೆಳೆದರು.
ಮೆರವಣಿಗೆಯಲ್ಲಿ ನಾಡಿನ 60ಕ್ಕೂ ಹೆಚ್ಚು ಬಂಟರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮುದಾಯದ ನೂರಾರು ಕ್ರೀಡಾಪಟುಗಳಿದ್ದರು.
ಬೋರ್ಡ್ ಹೈಸ್ಕೂಲ್ ನಿಂದ ಕೆ.ಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಸಾಗಿದ ಮೆರವಣಿಗೆ, ಬಂಟರ ಕ್ರೀಡೋತ್ಸವ ನಡೆಯುವ ಜಿಲ್ಲಾ ಕ್ರೀಡಾಂಗಣ ತಲುಪಿತು.
ಆಕರ್ಷಕ ಪಥಸಂಚಲನ
ವಿಶ್ವ ಬಂಟರ ಸಮ್ಮೇಳನ ಅಂಗವಾಗಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆಕರ್ಷಕ ಪಥ ಸಂಚಲನ ತುಳುನಾಡಿನ ನೆಲದ ಸಂಸ್ಕೃತಿ ಮತ್ತು ಬಂಟರ ನಡುವಿನ ನಂಟಿನ ಪ್ರದರ್ಶನಕ್ಕೆ ವೇದಿಕೆಯಾಯಿತು.
ಪಥ ಸಂಚಲನದಲ್ಲಿ ಕಂಬಳದ ಕೋಣಗಳು, ಹುಲಿ ವೇಷಧಾರಿಗಳು, ಚೆಂಡೆವಾದನ, ಯಕ್ಷಗಾನ ವೇಷ, ನೊಗ, ನೇಗಿಲು, ಏತ ನೀರಾವರಿ, ಮೊರಾಯಿ, ಮೊರ, ಕಲಶ ಮೊದಲಾದ ಕೃಷಿ ಪರಿಕರಗಳೊಂದಿಗೆ ಸಾಗಿ ಬಂದ ಬಂಟರ ಸಂಘದ ಪ್ರತಿನಿಧಿಗಳು ನೆಲದ ಸಂಪ್ರದಾಯದ ತುಡಿತ ತೋರಿದರು.
ಬಿಳಿ, ನೀಲಿ, ಹಸಿರು, ಗುಲಾಬಿ, ತಿಳಿ ನೀಲಿ, ಹಳದಿ, ಮೆರೂನ್, ಕೇಸರು ಹೀಗೆ ಬಗೆ ಬಗೆಯ ಬಣ್ಣದ ಸಮವಸ್ತ್ರ, ರಂಗು ರಂಗಿನ ಪೇಟಗಳು ಪ್ರತಿ ಸಂಘಟನೆಯ ವೈಶಿಷ್ಟ್ಯ ಸಾರಿದವು.
ಕೆಲವು ತಂಡಗಳು ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳ ಸಮವಸ್ತ್ರದ ಮೂಲಕ ಗಮನ ಸೆಳೆದವು.
ಕೆಲವು ತಂಡಗಳ ಮಹಿಳಾ ಪ್ರತಿನಿಧಿಗಳು ಕಲಶ ಕೈಯಲ್ಲಿ ಹಿಡಿದು ಸಾಗಿದರೆ, ಮತ್ತೆ ಕೆಲವು ತಂಡಗಳ ಮಹಿಳೆಯರು ರಾಣಿ ಅಬ್ಬಕ್ಕನ ರೀತಿ ವೇಷ ಧರಿಸಿ ಪಥ ಸಂಚಲನದ ಮೆರುಗು ಹೆಚ್ಚಿಸಿದರು. ಇನ್ನು ಕೆಲವು ತಂಡಗಳ ಸದಸ್ಯರು ಆಕರ್ಷಕ ಸೀರೆ, ಧೋತಿಯ ಮೂಲಕ ಕರಾವಳಿಯ ಸಾಂಪ್ರದಾಯಿಕ ಉಡುಪುಗಳಿಂದ ಗತ್ತು ಮೆರೆದರು.
ಪಡುಬಿದ್ರಿ ತಂಡದ ಜೊತೆ ಸಾಗಿ ಬಂದ ಕಂಬಳದ ಕೋಣ, ವೇದಿಕೆಗೆ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆಯಿತು.
ಪಡುಬಿದ್ರಿ, ಉಳ್ಳಾಲ, ಬಜಗೋಳಿ, ಮೀಂಜ, ಪುತ್ತೂರು, ಕಂಕನಾಡಿ, ಹಿರಿಯಡ್ಕ, ಬೈಂದೂರು, ಬೆಂಗಳೂರು, ಚಿಕ್ಕಮಗಳೂರು, ಶಂಕರಪುರ ಕಟಪಾಡಿ, ಕಳಸ, ಮೂಡುಬಿದಿರೆ, ಬಂಟ್ವಾಳ, ಅದ್ಯಪಾಡಿ, ಬಜಪೆ, ಮುಂಬೈ, ಮಂಜೇಶ್ವರ,ಕೊಡಗು, ಜೆಪ್ಪು, ಉಡುಪಿ ಗ್ರಾಮೀಣ, ಉಪ್ಪೂರು, ಪುತ್ತೂರು ನಗರ, ಗೋವಾ, ಜೆಪ್ಪಿನಮೊಗರು, ಸುರತ್ಕಲ್, ಸುಳ್ಯ, ಬೆಳ್ತಂಗಡಿ, ಕಾವೂರು, ಗುರುಪುರ, ಬೆಳ್ಮಣ್ಣು, ಬೆಳ್ಳಂಪಳ್ಳಿ, ಕುಕ್ಕುಂದೂರು, ಶಿರ್ವ, ಹಾವಂಜೆ, ಪುಣೆ, ಮೂಲ್ಕಿ, ಪಳ್ಳಿ ನಿಂಜೂರು, ಕುಂಬಳೆ ಕಾಸರಗೋಡು, ಮೈಸೂರು, ಕಾರ್ಕಳ, ಉಜಿರೆ, ಎಕ್ಕಾರು, ಕೊಡವೂರು, ಕುಂದಾಪುರ, ಉಡುಪಿ ಬಂಟರ ಸಂಘಗಳ ತಂಡಗಳು ಸೇರಿದಂತೆ ಒಟ್ಟು 62 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.