Kannada: ಕನ್ನಡದ ಸುಕುಮಾರ ಶಾಂತಿನಾಥ
Monday, November 13, 2023
ಕವಿ ಶಾಂತಿನಾಥನ ತಂದೆ ಜೈನ ಸಮುದಾಯಕ್ಕೆ ಸೇರಿದ ಗೋವಿಂದ ರಾಜ. ವರ್ಧಮಾನ ಯತಿಗಳೇ ಗುರುಗಳು. ಅವರ ತಮ್ಮ ರೇವಣ ಖ್ಯಾತ ವಾಗ್ಭೂಷಣರು. ಕರ್ಣಪಾರ್ಯ ಹಿರಿಯಣ್ಣ.
ಬನವಾಸಿ 12000ಕ್ಕೆ ಅಧಿಕಪತಿಯೂ, ಮಹಾಮಂಡಲೇಶ್ವರನೂ ಆಗಿದ್ದ ಲಕ್ಷ್ಮಣ ರಾಜ, (ಲಕ್ಷ್ಮನೃಪ) ಶಾಂತಿನಾಥನಿಗೆ ಆಶ್ರಯ ಕೊಟ್ಟ ದೊರೆ.
ಲಕ್ಷ್ಮಣ ರಾಜನ ಆಡಳಿತದ ಅವಧಿಯಲ್ಲಿ ಶಾಂತಿನಾಥನಿಗೆ ಉನ್ನತವಾದ ಸ್ಥಾನ ಮಾನಗಳು ಲಭಿಸಿದವು.
ಲಕ್ಷ್ಮನೃಪ, ಶಾಂತಿನಾಥನನ್ನು ಅರ್ಥಾಧಿಕಾರಿಯನ್ನಾಗಿಯೂ ನೇಮಿಸಿದ್ದ. ರಾಜಕಾರ್ಯ ಧುರಂದರನಾದ ಶಾಂತಿನಾಥ, ಆ ರಾಜ್ಯ ಸಮುದ್ಧರಣನೂ ಆಗಿದ್ದ.
ಶಾಂತಿನಾತನಿಗೆ ಜೈನ ಧರ್ಮದಲ್ಲಿ ಅಪಾರ ಶ್ರದ್ಧೆ, ಅನಂತ ಗೌರವ, ಅಮಿತ ಆಸಕ್ತಿ, ಅತೀವ ಅನುರಾಗ.
ತನ್ನ ಸ್ವಧರ್ಮವಾದ ಜಿನಧರ್ಮವೇ ಪರಮ ಧರ್ಮ ಎಂಬ ನಂಬಿಕೆ. ಹಲವಾರು ಜೈನ ಬಸದಿಗಳನ್ನು ನಿರ್ಮಿಸಿದ ಪ್ರಸಿದ್ಧಿಯೂ ಆತನಿಗಿದೆ.
ಹನ್ನೊಂದನೆಯ ಶತಮಾನದಲ್ಲಿ ಮಂಕಾಗಿದ್ದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ತನ್ನ ಅಸಾಧಾರಣ ಪ್ರತಿಭೆಯಿಂದ ಉಜ್ವಲವಾಗಿಸಿದ ಹಿರಿಯ ಕವಿ ಶಾಂತಿನಾಥ.
ಶಾಂತಿನಾಥ ಕವಿಯ ಕೃತಿಗಳು ಪ್ರಕಟಗೊಳ್ಳುವ ವರೆಗೂ ಕನ್ನಡ ಸಾಹಿತ್ಯದಲ್ಲಿ ಹನ್ನೊಂದನೆಯ ಶತಮಾನ ಬರಡುಗಾಲ ಎಂಬ ಅಪಖ್ಯಾತಿಗೊಳಗಾಗಿತ್ತು.
ಕಾಶೀನಾಥರ ಸುಕುಮಾರ ಚರಿತೆ ಅಚ್ಚಾಗಿ ಕಾವ್ಯ ವಿಮರ್ಶಕರು ಹಾಗೂ ವಿದ್ವಾಂಸರ ಗಮನಕ್ಕೆ ಬಂದ ಮೇಲೆ ಶಾಂತಿನಾಥನ ಕವಿತಾ ಸಾಮರ್ಥ್ಯ ಎಲ್ಲರಿಂದ ಕೊಂಡಾಡಲ್ಪಟ್ಟಿತು.
ಕನ್ನಡದ ರತ್ನತ್ರಯರೆಂದು ಖ್ಯಾತರಾದ ಪಂಪ, ರನ್ನ ಮತ್ತು ಜನ್ನರಿಂದ ಕಾವ್ಯದ ಸಮಗ್ರತೆಗೆ ಬೇಕಾದ ಏಕಾಗ್ರತೆಯ ಆದರ್ಶವನ್ನು ಮೈಗೂಡಿಸಿಕೊಂಡ ಧೀಃಶಕ್ತಿಯ ಪ್ರೌಢ ಕವಿಯಾದ ಶಾಂತಿನಾಥ, ಸುಕುಮಾರ ಚರಿತೆಯನ್ನು ಚಂಪೂ ಕಾವ್ಯ ಶೈಲಿಯಲ್ಲಿ ನಿರೂಪಿಸಿದ್ದ.
ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪುನರುತ್ಥಾನಗೊಳಿಸಿದ ಕವಿ ಶಾಂತಿನಾಥನಿಗೆ ಮನದುಂಬಿ ನಮಿಸೋಣ.