-->
ಪೆಹಲ್ಗಾಮ್ ಹಿಂದೂ ನರಮೇಧ- ಮಲ್ಪೆ ಕಡಲ ತೀರದಲ್ಲಿ ಸದ್ಗತಿಗಾಗಿ ತರ್ಪಣ, ಗೀತಾ ತ್ರಿಷ್ಟುಪ್ ಹೋಮ

ಪೆಹಲ್ಗಾಮ್ ಹಿಂದೂ ನರಮೇಧ- ಮಲ್ಪೆ ಕಡಲ ತೀರದಲ್ಲಿ ಸದ್ಗತಿಗಾಗಿ ತರ್ಪಣ, ಗೀತಾ ತ್ರಿಷ್ಟುಪ್ ಹೋಮ

ಲೋಕಬಂಧು ನ್ಯೂಸ್
ಉಡುಪಿ: ಪೆಹಲ್ಗಾಮ್ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಹಿಂದೂಗಳ ನರಮೇಧಕ್ಕೆ ದೇಶ ಮರುಗುತ್ತಿದೆ. ದುಷ್ಟರ ಸಂಹಾರಕ್ಕೆ ಜನ ಕಾಯುತ್ತಿದ್ದಾರೆ. ಈ ನಡುವೆ ಉಡುಪಿಯ ಅಭಿನವ ಭಾರತ ಎಂಬ ರಾಷ್ಟ್ರೀಯವಾದಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಸೋಮವಾರ ತರ್ಪಣ ನೀಡಿ ಹೋಮ ನಡೆಸಿ, ನಾವೆಲ್ಲರೂ ನೊಂದ ಕುಟುಂಬದ ಮಕ್ಕಳು ಎಂಬ ಭಾವವನ್ನು ತೋರಿದ್ದಾರೆ.
ಪೆಹೆಲ್ಗಾಮ್ ನಲ್ಲಿ ನಡೆದ ಹಿಂದೂ ನರಮೇಧದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ಹೋಮ ಮತ್ತು ತರ್ಪಣ ನೀಡುವ ಮೂಲಕ ಅಪರ ಧಾರ್ಮಿಕ ವಿಧಿ ಮಲ್ಪೆ ಕಡಲ ತೀರದಲ್ಲಿ ನಡೆಸಲಾಯಿತು.
ಮಲ್ಪೆಯ ಹನೂಮಾನ್ ವಿಠೋಭ ರಕುಮಾಯಿ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಎಲ್ಲಾ ವಿಧಿಗಳು ನೆರವೇರಿದವು.


ಘಟನೆಯಲ್ಲಿ ಮೃತಪಟ್ಟ 25 ಜನ ಹಿಂದೂಗಳ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆಗೈದು ಹೋಮ ನೆರವೇರಿಸಲಾಯಿತು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳ ನೇತೃತ್ವದಲ್ಲಿ, ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಗೀತಾ ತ್ರಿಷ್ಟುಪ್ ಹೋಮ ನೆರವೇರಿಸಿ ಪೂರ್ಣಾಹುತಿ ಮಾಡಲಾಯಿತು.


ಯಾತನಾಮಯ ಮರಣದಿಂದ ಮಡಿದ ಆತ್ಮಕ್ಕೆ ಸದ್ಗತಿ ಸಿಗಲಿ, ಕುಟುಂಬಕ್ಕೆ ನೋವು ಕಡಿಮೆಯಾಗಿ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯಿತು.


ಅಭಿನವ ಭಾರತ ಸೊಸೈಟಿ ಸಂಘಟನೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, 25 ಕುಟುಂಬಗಳ ಪರವಾಗಿ ಹಿಂದೂ ಸಂಘಟನೆ 25 ಯುವಕರು ಅಪರ ಕ್ರಿಯೆಯ ವಿಧಿಯನ್ನು ನೆರವೇರಿಸಿದರು.


ಗೀತಾ ತ್ರಿಷ್ಟುಪ್ ಮಂತ್ರವನ್ನು ಸಾವಿರ ಸಂಖ್ಯೆಯ ಜಪ ಮಾಡಿ ಹೋಮ ನಡೆಸಲಾಗಿದೆ. ಜಾತಿ ಮತ ಸಂಪ್ರದಾಯ ಭೂಪ್ರದೇಶ ಎಲ್ಲವನ್ನು ಮೀರಿ ಮೃತರ ಆತ್ಮಕ್ಕೆ ಹಿಂದೂ ಧರ್ಮದ ಮಾದರಿಯಲ್ಲಿ ಧಾರ್ಮಿಕ ವಿಧಿ ನಡೆಸಲಾಯಿತು.


ಹೋಮದ ಬಗ್ಗೆ ಆಯೋಜಕ, ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ ಸಮಾಜ ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಹಿಂದೂಗಳು ಭಯೋತ್ಪಾದಕರ ಕಾಟ ಇದೆ ಎಂದು ಕಾಶ್ಮೀರಕ್ಕೆ ಹೋಗುವುದಿಲ್ಲ ಎನ್ನುವಂತಾಗಿದೆ. ಇದು ಹಿಂದೂಗಳ ದುಸ್ಥಿತಿ.


ಬಹುಸಂಖ್ಯಾತ ಸಮಾಜ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆದರಿ ಬದುಕುವಂತಾಗಿದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕತೆ ಬರಬೇಕಾದರೆ ಒಂದೇ ಕುಟುಂಬ ಎಂಬ ಭಾವನೆ ಬರಬೇಕು. ಈ ಏಕತಾ ಭಾವನೆಗಾಗಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿದೆ. ನಮ್ಮ ಕುಟುಂಬದವರು ಮೃತಪಟ್ಟರೆ ಪ್ರತೀ ವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀ ವರ್ಷ ಪಿತೃಗಳ ಹೆಸರಲ್ಲಿ ತರ್ಪಣ ಬಿಡುತ್ತೇವೆ.


ಆದರೆ ಪಹಲ್ಗಾಮ್ ಘಟನೆ ನಡೆದು ಎರಡು ವಾರದಲ್ಲಿ ಸಮಾಜಕ್ಕೆ ಈ ಘಟನೆ ಮರೆತುಹೋಗಿದೆ. ಪೆಹೆಲ್ಗಾಮ್ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡಾ ನೆನಪಿಲ್ಲ. ನಾವೆಲ್ಲ ಎಚ್ಚೆತ್ತುಕೊಂಡು ಇಂಥ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.


ನೂರಾರು ಸಾರ್ವಜನಿಕರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು.  ಹನುಮಾನ್ ರಕುಮಾಯಿ ವಿಠೋಭಾ ಮಂದಿರದಲ್ಲಿ ಹಿಂದೂ ಸಮಾಜದ ಪರವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಉಗ್ರ ಚಟುವಟಕೆಗೈದವರಿಗೆ ವಿರೋಧಿಗಳಿಗೆ ತಕ್ಕ ಪಾಠವಾಗಲಿ ಎಂದು ಪ್ರಾರ್ಥಿಸಲಾಯಿತು.


ಉದ್ಯಮಿ ಅಜಯ್ ಕೊಡವೂರು, ಹಿಂದೂ ಮುಖಂಡ ಪಾಂಡುರಂಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article