.jpg)
Pollution control: ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬ ನಾಗರಿಕರ ಕರ್ತವ್ಯ
Friday, November 10, 2023
ಉಡುಪಿ, ನ.10 (ಲೋಕಬಂಧು ವಾರ್ತೆ): ಮಾಲಿನ್ಯ ನಿಯಂತ್ರಣ ಮಾಡುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹೇಳಿದರು.
ಶುಕ್ರವಾರ ಮಣಿಪಾಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಾಯುವಿನ ಗುಣಮಟ್ಟ ಉತ್ತಮವಾಗಿದೆ. ಅದಕ್ಕೆ ಮುಖ್ಯ ಕಾರಣ ಇಲ್ಲಿನ ಪರಿಸರದಲ್ಲಿರುವ ಗಿಡ ಮರಗಳು. ಅವುಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.
ನಾನು ಈ ಹಿಂದೆ ದೆಹಲಿಯಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ವಾಯುಮಾಲಿನ್ಯ ಎಷ್ಟಿತ್ತೆಂದರೆ ಮನೆಯಿಂದ ಹೊರಗಡೆ ಬಂದರೆ ಕಣ್ಣುರಿ ಉಂಟಾಗುತ್ತಿತ್ತು. ಕೆಲವರಿಗೆ ಉಸಿರಾಡಲೂ ತೊಂದರೆಯಾಗುತ್ತಿತ್ತು. ಅದಕ್ಕೆ ಕಾರಣ ವಾಹನಗಳು ಹೊರಸೂಸುವ ಹೊಗೆ ಹಾಗೂ ನೆರೆಯ ಪಂಜಾಬ್, ಹರಿಯಾಣದಲ್ಲಿ ಕೊಳೆ ಸುಡುವ ಪರಿಪಾಠ ಕಾರಣವಾಗಿತ್ತು ಎಂದರು.
ಕಳೆದ ಜೂನ್ ತಿಂಗಳಲ್ಲಿ ಸರಕಾರ ಒಂದು ಕೋಟಿಗೂ ಹೆಚ್ಚು ಗಿಡ ಮರಗಳನ್ನು ನೆಟ್ಟಿದೆ. ಇದು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಗಿಡ ಮರಗಳ ಬೆಳೆಸುವಿಕೆಯಿಂದ ವಾಯು ಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ವಾಯು ಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಶಿಕ್ಷಿತರು ಹಾಗೂ ಶ್ರೀಮಂತರೇ ಮುಖ್ಯ ಕಾರಣ.
ಬಡಗುಬೆಟ್ಟು ಗ್ರಾಮ, ಪಂಚಾಯತ್ ವ್ಯಾಪ್ತಿಯ ಮಣಿಪಾಲದ ಕೆಲವು ಶಿಕ್ಷಿತರು ತಮ್ಮ ಮನೆಯ ಕಸವನ್ನು ಕಸ ಸಂಗ್ರಹಣಾಗಾರರಿಗೆ ನೀಡದೇ, ಕಸವನ್ನು ಸುಡುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.
ಕೆಲವು ಶ್ರೀಮಂತರು ಬೆಳಗಿನ ವಾಯು ವಿಹಾರಕ್ಕೆ ಜಿಲ್ಲಾ ಆಟದ ಮೈದಾನಕ್ಕೆ ವಾಹನಗಳಲ್ಲಿ ಬಂದು ಅಲ್ಲಿನ ಜಿಮ್ ನಲ್ಲಿ ಥ್ರೆಡ್ ಮಿಲ್ ಗಳನ್ನು ಬಳಸುತ್ತಾರೆ. ವಾಹನಗಳಲ್ಲಿ ಬರುವ ಬದಲು ಅವರು ಮನೆಯಿಂದಲೇ ನಡೆದುಕೊಂಡು ಬಂದರೆ ವಾಹನದಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸಿ, ಮಾಲಿನ್ಯ ಕಡಿಮೆಗೊಳಿಸಬಹುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ. ಮಾತನಾಡಿ, ಇತ್ತೀಚೆಗೆ ವಾಯು ಮಾಲಿನ್ಯದಿಂದ ಹವಾಮಾನ ಬದಲಾವಣೆ ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಅದರ ನಿಯಂತ್ರಣಕ್ಕೆ ಪ್ರತಿಯೊಬ್ಬ ಜನಸಾಮಾನ್ಯರು ಮುಂದಾಗುವುದರೊಂದಿಗೆ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ. ರವಿಶಂಕರ್, ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲೀಷ್ ನ್ನು ಬಳಕೆ ಮಾಡಲಾಗುತ್ತಿದೆ ಇದು ಸರಿಯಲ್ಲ. ಅಂತಾರಾಷ್ಟ್ರೀಯ ಗುಣಮಟ್ಟದ ಶ್ರೇಷ್ಠ ಕೃತಿಗೆ ನೀಡುವ ಜ್ಞಾನಪೀಠ ಪ್ರಶಸ್ತಿಗಳು ಹಿಂದಿ ಭಾಷೆ 11 ಪ್ರಶಸ್ತಿ ಪಡೆದರೆ, ಕನ್ನಡ ಭಾಷೆಗೆ ಎಂಟು ಪ್ರಶಸ್ತಿ ಲಭಿಸಿದೆ.
ಪ್ರಸ್ತುತ ದೆಹಲಿಯ ವಾಯು ಮಾಲಿನ್ಯ ಸೂಚ್ಯಂಕ 400ರ ಗಡಿ ದಾಟಿದ್ದು, ಗಂಭೀರ ಸ್ಥಿತಿಯಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೀಗಾಗದಂತೆ ಜಾಗೃತರಾಗುವುದು ಅತ್ಯಶ್ಯಕ ಎಂದರು.
ಕಾರ್ಯಕ್ರಮದಲ್ಲಿ ದಂತ ವೈದ್ಯ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಘಟಕ ಮುಖ್ಯಸ್ಥ ಡಾ. ವಿಜಯೇಂದ್ರ, ಕರಾವಳಿ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಭಟ್, ಕೆ.ಎಸ್.ಆರ್.ಟಿ.ಸಿ ಉಡುಪಿ ವಿಭಾಗದ ಘಟಕ ವ್ಯವಸ್ಥಾಪಕ ಶಿವರಾಮ ನಾಯಕ್ ಮೊದಲಾದವರಿದ್ದರು.
ಶಾಂತರಾಜು ಸ್ವಾಗತಿಸಿದರು. ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ನಿರೂಪಿಸಿ, ಸರಸ್ವತಿ ವಂದಿಸಿದರು.
ಈ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಾಹಿತಿ ಕರಪತ್ರ ಬಿಡುಗಡೆಗೊಳಿಸಲಾಯಿತು.
ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿ ಸಸಿ ನೆಡಲಾಯಿತು.