ಅವನು ಕ್ರಿ.ಶ. 814-878ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದ ಲೇಖಕ.
ಕವಿರಾಜಮಾರ್ಗ ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ. ಅದು ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ ಮುಂತಾದ ವಿಷಯಗಳನ್ನು ಒಳಗೊಂಡ ಸಾಹಿತ್ಯಕ್ಕೆ ಸಂಬಂಧಿಸಿದ ಬರವಣಿಗೆ.
ಕವಿರಾಜಮಾರ್ಗ ಕರ್ನಾಟಕದ ನಾಡು, ನುಡಿ, ಜನ ಮತ್ತು ಸಂಸ್ಕೃತಿಗಳನ್ನು ಕುರಿತ ಸಮೃದ್ಧ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ನಾಡಿನ ಭೌಗೋಳಿಕವಾದ ಮತ್ತು ಸಾಂಸ್ಕೃತಿಕವಾದ ಗಡಿಗೆರೆಗಳನ್ನು ಗುರುತಿಸುವ ಮೊದಲ ಪ್ರಯತ್ನ ಮಾಡಿದ ಪುಸ್ತಕವೂ ಕವಿರಾಜಮಾರ್ಗವೇ ಆಗಿದೆ.
ಆದರೂ ಈ ಗ್ರಂಥವು ದಕ್ಷಿಣ ಭಾರತದ ಲಾಕ್ಷಣಿಕನಾದ ದಂಡಿಯ ಸಂಸ್ಕೃತ ಕೃತಿ ಕಾವ್ಯಾದರ್ಶವನ್ನು ಸಾಕಷ್ಟು ಅವಲಂಬಿಸಿದೆ ಎಂಬುದು ವಿದ್ವಾಂಸರ ಅನಿಸಿಕೆ.
ಒಟ್ಟಾರೆ ತನ್ನ ಕೃತಿಯಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿ ಜನಪದದ ಮೇಲಿನ ಅಪಾರ ಅಭಿಮಾನ ಮತ್ತು ಹೆಮ್ಮೆಯಿಂದ ಕವಿ ಶ್ರೀವಿಜಯ ಕನ್ನಡಿಗರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದ್ದಾರೆ.
ಕನ್ನಡನಾಡಿನ ಗೌರವ ಹೆಚ್ಚಿಸಿದ ಶ್ರೀವಿಜಯ ಕವಿಗೆ ಶರಣು ಶರಣಾರ್ಥಿ.