.jpg)
ಗಣೇಶ ಚತುರ್ಥಿಗೆ ಭರದ ಸಿದ್ದತೆ
Friday, September 6, 2024
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ತುಸು ಇಳಿಕೆಯಾಗಿದೆ. ಕಳೆದ ವರ್ಷ 80 ರೂ. ಇದ್ದ 1 ಕೋಲು ಕಬ್ಬಿನ ಬೆಲೆ ಈ ಬಾರಿ 60 ರೂ.ಗೆ ಮಾರಾಟವಾಗುತ್ತಿದೆ. ಸೇವಂತಿಗೆ ದರ ಇಳಿಕೆಯಾಗಿದ್ದು, ಸೇವಂತಿಗೆ ಮಾರಿಗೆ 100 ರೂ., ಕಾಕಡ 100 ರೂ., ಅಬ್ಬಲಿಗೆ 70 ರೂ., ಮಲ್ಲಿಗೆ ಅಟ್ಟೆಗೆ 830 ರೂ., ಜಾಜಿ 570 ರೂ. ನಿಗದಿಯಾಗಿದೆ.
ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ರಥಬೀದಿ, ನಗರದ ಕೆ.ಎಂ ಮಾರ್ಗ ಸೇರಿದಂತೆ ವಿವಿಧ ಪ್ರದೇಶದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ.
ರಥಬೀದಿಯಲ್ಲಿ ಗಣೇಶೋತ್ಸವಕ್ಕೆ ಬಹು ಬೇಡಿಕೆಯಾದ ಗರಿಕೆ, ಕಬ್ಬು, ಹಳದಿ ಎಲೆ, ಮೂಡೆ ಎಲೆ ವ್ಯಾಪಾರ ಬಿರುಸಾಗಿದೆ. ಸಾರ್ವಜನಿಕರು ಗಣೇಶನಿಗೆ ಸಮರ್ಪಣೆ ಮಾಡಲು ಉಂಡೆ, ಚಕ್ಕುಲಿ ಹಿಟ್ಟುಗಳು, ಲಡ್ಡು, ಹೂ, ಹಣ್ಣು ಖರೀದಿಸುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ಗಣೇಶೋತ್ಸವ ಸಮಿತಿಗಳಾದ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ 58ನೇ ವರ್ಷ, ಕೊಡವೂರು ಗಣೇಶೋತ್ಸವ ಸಮಿತಿ 56ನೇ ವರ್ಷದ ಹಬ್ಬ, ಪರ್ಕಳ ಸಾರ್ವಜನಿಕ ಗಣೇಶೋತ್ಸವ 57ನೇ ವರ್ಷ, ಬಾರ್ಕೂರು ಪಟ್ಟಾಭಿರಾಮ ದೇವಳದ 57ನೇ ವರ್ಷದ ಗಣಪತಿ, ಅಂಬಲಪಾಡಿ ಗಣೇಶೋತ್ಸವ ಸಮಿತಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್, ಪಡುಬಿದ್ರಿ, ಅಂಬಾಗಿಲು, ಹಟ್ಟಿಯಂಗಡಿ ಸೇರಿದಂತೆ ವಿವಿಧೆಡೆ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ
ಗಣೇಶನ ವಿಗ್ರಹ ತಯಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ವಿಗ್ರಹ ರಚನಾಕಾರರು ಮೂರ್ತಿಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕುಂದಾಪುರ, ಬಂಟ್ವಾಳ ಮೊದಲಾದ ಕಡೆ ಹೆಂಚಿನ ಫ್ಯಾಕ್ಟರಿಗಳಿಂದ ಆವೆಮಣ್ಣು ತಂದು ವಿಗ್ರಹ ರಚಿಸುತ್ತಿದ್ದಾರೆ. ಪರಿಸರ ಸ್ನೇಹಿ ಬಣ್ಣ ರಹಿತ ಗಣಪತಿಗೂ ಬೇಡಿಕೆ ಹೆಚ್ಚಾಗಿದೆ.
ಜಿಲ್ಲಾಡಳಿತ ವಿಶೇಷವಾಗಿ ಪಿಒಪಿ ಗಣಪತಿ ವಿಗ್ರಹ ಬಳಕೆ ನಿಷೇಧಿಸಿದೆ.