ವಿದ್ಯಾರ್ಥಿಗಳ ಸುಪ್ತ ಶಕ್ತಿ ಗುರುತಿಸುವ ಕಾರ್ಯ ಶಿಕ್ಷಕರದು
Thursday, September 5, 2024
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಪ್ರತೀ ವಿದ್ಯಾರ್ಥಿಯಲ್ಲೂ ಅಪರಿಮಿತ ಶಕ್ತಿ ಅಡಗಿರುತ್ತದೆ. ಅದನ್ನು ಗುರುತಿಸುವ ಕಾರ್ಯ ಶಿಕ್ಷಕರದು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ ರಾವ್ ಕುಂದಾರು ಹೇಳಿದರು.ಜ್ಞಾನಸುಧಾ ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಮಾತನಾಡಿದರು.
ಪ್ರಾಥಮಿಕ ಶಾಲೆಯ ಶಿಕ್ಷಕರು ನಮ್ಮ ಮನಃಪಟಲದಲ್ಲಿ ಸದಾಕಾಲ ನೆಲೆಸಿರುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಮಾದರಿ ವ್ಯಕ್ತಿತ್ವದವರಾಗಬೇಕು. ಆಗ ಮಾತ್ರ ಅವರನ್ನು ತಿದ್ದಿ ತೀಡಲು ಸಾಧ್ಯ ಎಂದರು.
ಸಾಮಾನ್ಯ ಕೆಲಸಗಾರರಿಗಿರುವ ಧೈರ್ಯ ವಿದ್ಯಾರ್ಥಿಗಳಿಗೂ ಬರಬೇಕು. ಆಗ ಮಾತ್ರ ಅವರ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವತಿಯಿಂದ ನಿಟ್ಟೂರು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಡಿ. ಸುವರ್ಣ, ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ದಯಾವತಿ, ಉಡುಪಿ ಪುತ್ತೂರು ಎಲ್.ವಿ.ಪಿ. ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಐರಿನ್ ಮೆನೇಜಸ್, ಕುದಿ ವಿಷ್ಣುಮೂರ್ತಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಪ್ರಭು ಹಾಗೂ ಪರ್ಕಳ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವಾಸು ಪ್ರಭು ಅವರನ್ನು ಗೌರವಿಸಲಾಯಿತು.
ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಿಖಿಲ್ ವಿಕ್ರಮ್ ಕೆ.ಎಸ್. ಮತ್ತು ಮಿಥಾಲಿ ಶೆಟ್ಟಿ ಹಾಗೂ ಟೇಬಲ್ ಟೆನ್ನಿಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ವತ್ ವಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜು ಪ್ರಾಂಶುಪಾಲ ಗಣೇಶ್ ಶೆಟ್ಟಿ ಇದ್ದರು.
ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ಪ್ರಾಂಶುಪಾಲ ಸಂತೋಷ್ ಸ್ವಾಗತಿಸಿ, ಉಪಪ್ರಾಂಶುಪಾಲ ಪ್ರಕಾಶ್ ಜೋಗಿ ವಂದಿಸಿದರು. ಉಪನ್ಯಾಸಕಿ ಪವಿತ್ರ ನಿರೂಪಿಸಿದರು.