ಏ.12-22: ಭಾರತ ಮೇಳ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ಜಿ.ಪಂ, ತುಳುಕೂಟ, ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಲಯನ್ಸ್ ಕ್ಲಬ್, ಸಾಸ್ ಮಹಿಳಾ ಘಟಕ ಸಹಯೋಗದಲ್ಲಿ ಏಪ್ರಿಲ್12ರಿಂದ 22ರ ವರೆಗೆ ಗೀತಾ ಮಂದಿರದಲ್ಲಿ ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಪ್ರದರ್ಶನ ಮತ್ತು ಮಾರಾಟ 'ಭಾರತ ಮೇಳ' ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೇಳದಲ್ಲಿ ಹಳೆಯ ಪುಸ್ತಕಗಳು, ಹಳೆಯ ಜೀವನ ಪದ್ಧತಿ ಮಾಹಿತಿಗಳು, ತಾಳೆಗರಿ ಗ್ರಂಥಗಳ ಸಹಿತ ಪಾರಂಪರಿಕ ವಸ್ತುಗಳ ಪ್ರದರ್ಶನ, ಕೃತಕ ಆಭರಣ, ಖಾದಿ ಮತ್ತು ಕೈಮಗ್ಗ ವಸ್ತ್ರಗಳ ಭಂಡಾರ, ಕರಕುಶಲ ವಸ್ತುಗಳು, ಗವ್ಯೋತ್ಪನ್ನಗಳು, ಜ್ಯೋತಿಷ್ಯ, ಖಗೋಳ ಮಾಹಿತಿ, ಮಣ್ಣಿನ ಮಡಿಕೆಗಳು, ವಿಗ್ರಹ, ಗಂಜೀಫಾ ಚಿತ್ರಕಲಾ ವೈಭವ ಮಳಿಗೆಗಳು ಪ್ರದರ್ಶನದಲ್ಲಿವೆ ಎಂದರು.
ಏ.12ರಂದು ಅಪರಾಹ್ನ 4 ಗಂಟೆಗೆ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಮೇಳ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿ.ವಿ. ಉಪಕುಲಪತಿ ಡಾ. ಅಹಲ್ಯಾ ಮುಖ್ಯ ಅತಿಥಿಗಳಾಗಿರುವರು ಎಂದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀರಮಣ ಆಚಾರ್ಯ, ತುಳುಕೂಟ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಉಮಾ ಸುವರ್ಣ, ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ತಾರಾ ಸತೀಶ್, ಕೋಶಾಧಿಕಾರಿ ಜ್ಯೋತಿ ಸತೀಶ್ ದೇವಾಡಿಗ, ನಗರದ ಅಧ್ಯಕ್ಷೆ ಸುಕನ್ಯಾ ಶೇಖರ್, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರ್, ಕೋಶಾಧಿಕಾರಿ ದಿವಾಕರ ಶೆಟ್ಟಿ ಬುಡ್ನಾರು, ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ರತ್ನಾಕರ ಇಂದ್ರಾಳಿ ಮೊದಲಾದವರಿದ್ದರು.