
ಮಾದರಿ ಸೋಲಾರ್ ಗ್ರಾಮಕ್ಕೆ 5 ಗ್ರಾಮ ಪಂಚಾಯತ್ ಆಯ್ಕೆ
Saturday, May 17, 2025
ಲೋಕಬಂಧು ನ್ಯೂಸ್, ಉಡುಪಿ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಪಂಚಾಯತ್ ಗಳಾಗಿ ಆಯ್ಕೆ ಮಾಡಲು ಉಡುಪಿ ಜಿಲ್ಲೆಯ 5 ಪಂಚಾಯತ್ ಗಳ ಆಯ್ಕೆಗೆ ಶಿಫಾರಸು ಮಾಡಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ, ಕಾಪುವಿನ ಮಜೂರು ಮತ್ತು ಉಡುಪಿಯ ಉಪ್ಪೂರು ಪಂಚಾಯತ್ ಗಳನ್ನು ಸೂರ್ಯ ಘರ್ ಯೋಜನೆಯಡಿ ಮಾದರಿ ಸೋಲಾರ್ ಗ್ರಾಮ ಪಂಚಾಯತ್ ಗಳಾಗಿ ಅಳವಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ.
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆ ಮನೆಗೂ ಸ್ವಯಂ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಸಂಕಲ್ಪದಲ್ಲಿ 300 ಯೂನಿಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ 2.2 ಲಕ್ಷ ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿದ್ದು, ಸೋಲಾರ್ ಅಳವಡಿಕೆ ಮಾಡಿಕೊಂಡ ಕುಟುಂಬಗಳಿಗೆ 78 ಸಾವಿರ ಸಬ್ಸಿಡಿ ನೀಡಲಾಗುತ್ತಿದೆ.
ಈ ಯೋಜನೆ ಪ್ರತಿ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಗಳ ಎಲ್ಲಾ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಯೋಜನೆ ಅಳವಡಿಕೆಗೆ ಶ್ರಮ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ತಿಳಿಸಿದರು.
ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ 5 ಪಂಚಾಯತ್ ಗಳ ಯಶಸ್ಸನ್ನು ಪರಿಗಣಿಸಿ ಉಳಿದ ಪಂಚಾಯತ್ ಗಳಿಗೆ ವಿಸ್ತರಿಸಲಾಗುವುದು ಮತ್ತು ಆಯ್ಕೆಯಾದ ಗ್ರಾಮ ಪಂಚಾಯತ್ ಗಳಿಗೆ ವಿಶೇಷ ಅನುದಾನ ನೀಡಲು ಶಿಫಾರಸು ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಿ. ದಿನೇಶ್ ಉಪಾಧ್ಯಾಯ ಮೊದಲಾದವರಿದ್ದರು.