
ಕಲಾಯತನ: ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ವೀಳ್ಯ ನೀಡಿ ಆಹ್ವಾನ
Tuesday, May 13, 2025
ಲೋಕಬಂಧು ನ್ಯೂಸ್
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಳ ಸಭಾಂಗಣದಲ್ಲಿ ಮೇ 17ರಂದು ನಡೆಯುವ 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ಕಲಾಯತನ'ದ ಸರ್ವಾಧ್ಯಕ್ಷ ಹಿರಿಯ ಯಕ್ಷಗಾನ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಅವರ ಮನೆಗೆ ತೆರಳಿ, ವೀಳ್ಯದೊಂದಿಗೆ ಆಮಂತ್ರಣಪತ್ರ ನೀಡುವ ಸಾಂಪ್ರದಾಯಿಕ ಕಾರ್ಯಕ್ರಮ ಮೇ 12ರಂದು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಎಂ.ಎಲ್. ಸಾಮಗ , ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆ ಮಾತ್ರವಲ್ಲದೆ ಎಲ್ಲಾ ಸಾಹಿತಿಗಳು, ಕಲಾಸಕ್ತರ ಒಟ್ಟುಗೂಡುವಿಕೆಯಾಗಿದೆ. ಆ ಮೂಲಕ ಸಾಹಿತ್ಯದ ಬೆಳವಣಿಗೆಗೆ ಪರೋಕ್ಷ ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಮಗರ ಪತ್ನಿ, ಕಲಾವಿದೆ ಪ್ರತಿಭಾ ಸಾಮಗ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್, ಹಿರಿಯರಾದ ಭುವನ ಪ್ರಸಾದ್ ಹೆಗ್ಡೆ, ಕೊಡವೂರು ದೇವಳದ ಆಡಳಿತ ಮಂಡಳಿ ಸದಸ್ಯ ವಾದಿರಾಜ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಶೆಣೈ, ವಿದ್ಯಾ ಶಾಮಸುಂದರ್, ಕಸಾಪ ಪದಾಧಿಕಾರಿಗಳಾದ ಪೂರ್ಣಿಮಾ ಜನಾರ್ದನ್, ರಂಜನಿ ವಸಂತ್, ಅನಿತಾ ಸಿಕ್ವೇರಾ, ವಸಂತ್, ರಾಜೇಶ್ ಭಟ್ ಪಣಿಯಾಡಿ , ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಸಾಹಿತಿ ಡಾ.ಕಾತ್ಯಾಯನಿ ಕುಂಜಿಬೆಟ್ಟು, ಲಕ್ಷ್ಮೀನಾರಾಯಣ ಉಪಾಧ್ಯ, ಸುಶಾಂತ್ ಕೆರೆಮಠ ಇದ್ದರು.
ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.