-->
ಪೊಲೀಸ್ ಇಲಾಖೆ, ಗುಪ್ತಚರ ವೈಫಲ್ಯ

ಪೊಲೀಸ್ ಇಲಾಖೆ, ಗುಪ್ತಚರ ವೈಫಲ್ಯ

ಲೋಕಬಂಧು ನ್ಯೂಸ್, ಮಂಗಳೂರು
ದ.ಕ. ಜಿಲ್ಲೆಯಲ್ಲಿ ಕೋಮು ದ್ವೇಷದ ಕೊಲೆ ಪ್ರಕರಣದಲ್ಲಿ ಗುಪ್ತಚರ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲವು ಲೋಪದೋಷಗಳು ಇರುವುದನ್ನು ಜನಾಭಿಪ್ರಾಯದ ಮೇಲೆ ಒಪ್ಪಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಹೇಳಿದ್ದಾರೆ.ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋಮು ಪ್ರಚೋದನಕಾರಿ ಭಾಷಣ ಮಾಡುವವರು, ಕೋಮು ಗಲಭೆಗಳಿಗೆ ಕಾರಣವಾಗುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿರುವುದು ಹೌದು ಎಂದರು.


ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ನೋಡುವಾಗ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಕೋಮು ಶಕ್ತಿಗಳ ವಿರುದ್ಧದ ರಾಜ್ಯ ಸರಕಾರದ ದೃಷ್ಟಿಕೋನವನ್ನು ಪೊಲೀಸರು ಅರ್ಥ ಮಾಡಿಕೊಂಡಿಲ್ಲ ಅನ್ನಿಸುತ್ತಿದೆ. ಹಾಗಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಂತಿ ಸಭೆ ನಡೆಸಿ ಮುಂದೆ ಇಂಥ ಘಟನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸಲಿದ್ದಾರೆ ಎಂದವರು ಹೇಳಿದರು.


ಅಬ್ದುಲ್ ರೆಹಮಾನ್ ಕೊಲೆ ಹಾಗೂ ಇನ್ನೋರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೋವು ತಂದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರು ಕೊಲೆಗಳಾಗಿವೆ. ಸಮಾಜದಲ್ಲಿ ಅಶಾಂತಿ ಮೂಡಿಸಲಾಗಿದೆ.


ದ್ವೇಷ ಭಾಷಣ ಮಾಡಿ ಪ್ರಚೋದನೆ ನೀಡಿ ಇಂಥ ಕೃತ್ಯಕ್ಕೆ ಕಾರಣವಾಗುವವರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಕ್ಷಮಿಸಬಾರದು. ಆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಸಂತ್ರಸ್ತ ಕುಟುಂಬದ ಮನೆಯವರನ್ನು  ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ ಎಂದರು.


ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿರುವ ಅಲ್ಪಸಂಖ್ಯಾತ ನಾಯಕರು, ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಹಾಗೂ ಅವರ ಬೇಡಿಕೆಯಂತೆ ಅಗತ್ಯ ಕ್ರಮ ಕೈಗೊಳ್ಳುವ ಕೆಲಸವಾಗಲಿದೆ ಎಂದರು.


ಬ್ಲಾಕ್ ಅಧ್ಯಕ್ಷರಾದ ಜೆ. ಅಬ್ದುಲ್ ಸಲೀಂ ಮತ್ತು ಪ್ರಕಾಶ್ ಸಾಲಿಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ಆರಿಫ್ ಬಾವ ಬಂದರ್, ವಿಕಾಸ್ ಶೆಟ್ಟಿ, ಎನ್‌ಎಸ್ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಪಿ. ಮನುರಾಜ್, ಭಾಸ್ಕರ ರಾವ್, ಮನಪಾ ಮಾಜಿ ಸದಸ್ಯ ಸತೀಶ್ ಪೆಂಗಲ್, ಮುಖಂಡರಾದ ನಝೀರ್ ಬಜಾಲ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article