ಧರ್ಮಾಧಾರಿತ ಮೀಸಲಾತಿಯಿಂದ ಸಮಾಜ ಸ್ವಾಸ್ಥ್ಯಕ್ಕೆ ಧಕ್ಕೆ
Thursday, June 19, 2025
ಲೋಕಬಂಧು ನ್ಯೂಸ್, ಬೆಂಗಳೂರು
ಸಂವಿಧಾನ ಪಾಲಿಸುವ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ, ಧರ್ಮಾಧಾರಿತ ಮೀಸಲಾತಿ ನೀಡಿಕೆ ಹೆಚ್ಚಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಧರ್ಮದ ಮೇಲೆ ನೀಡುವ ಮೀಸಲಾತಿಯನ್ನು ಭಾರತದ ಸಂವಿಧಾನ ನಿಷೇಧಿಸುತ್ತದೆ. ಚುನಾವಣೆ ಲಾಭಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ.
ಮತ ಬ್ಯಾಂಕ್ ರಾಜಕೀಯಕ್ಕೆ ಆದ್ಯತೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಒಳಿತನ್ನು ಮರೆತಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುತ್ತಿದೆ.
ಅಭಿವೃದ್ಧಿ ಮರೆತ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಶಾಂತಿ ಮತ್ತು ಏಕತೆಯನ್ನು ಹಾಳುಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ.
ಧರ್ಮದ ಆಧಾರದ ಮೇಲೆ ಶೇ.15 ಮೀಸಲಾತಿ ನೀಡಲು ಕರ್ನಾಟಕ ಸರ್ಕಾರ ಕ್ಯಾಬಿನೆಟ್ ನಲ್ಲಿ ತಗೆದುಕೊಂಡ ನಿರ್ಧಾರ ಸಂವಿಧಾನದ ಸ್ಪಷ್ಟ ಉಲ್ಲಂಘನೆ.
ಈ ಹಿಂದೆ, ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಶೇ. 4ರಷ್ಟು ಮೀಸಲಾತಿಯನ್ನು ಒಂದು ಸಮುದಾಯಕ್ಕೆ ನೀಡಿತ್ತು ಮತ್ತು ಈಗ ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ ನೀಡಲು ತೀರ್ಮಾನಿಸಿದೆ. ಇದು ಎಸ್ಸಿ, ಎಸ್.ಟಿ., ಓಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿ ಹಾಗೂ ಅವರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಬಲವಾಗಿ ಖಂಡಿಸುವುದಾಗಿ ಸಚಿವ ಜೋಷಿ ತಿಳಿಸಿದ್ದಾರೆ.
ಸೇನೆಯಲ್ಲಿ ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿ ಪರಿಚಯಿಸಲು ಪ್ರಯತ್ನಿಸುತ್ತಿರುವುದೂ ಶೋಚನೀಯ. ಹಲವಾರು ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಇಂಥ ಅಸಾಂವಿಧಾನಿಕ ನಿರ್ಧಾರಗಳನ್ನು ರದ್ದುಗೊಳಿಸಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಈ ನೀತಿ, ನಿಯಮಗಳನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಪ್ರಹ್ಲಾದ ಜೋಷಿ ಹೇಳಿದ್ದಾರೆ.