ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆ ಇಲ್ಲ
Saturday, June 21, 2025
ಲೋಕಬಂಧು ನ್ಯೂಸ್, ಕುಂದಾಪುರ
ನನ್ನನ್ನು ಗಡಿಪಾರು ಮಾಡಲು ಆಗುವುದಿಲ್ಲ. ನನ್ನ ವಿರುದ್ಧ ರೌಡಿಶೀಟರ್, ಗಡಿಪಾರು, ಗೂಂಡಾ ಆ್ಯಕ್ಟ್ ತರಲು ಆಗುವುದಿಲ್ಲ. ನಾನು ಕದ್ದು ಮುಚ್ಚಿ ಓಡಾಡುವ ವ್ಯಕ್ತಿಯಲ್ಲ, ಸಮಾಜದ ನಡುವೆ ಓಡಾಡುತ್ತೇನೆ. ಇವರಿಗೆ ನನ್ನ ಓಡಾಟ ತಡೆಯಬಹುದು ಅಷ್ಟೇ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಕೋಮುವಾದಿ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರತೀ ಬಾರಿಯೂ ಕೋಮುವಾದದ ಬಗ್ಗೆ ಮಾತನಾಡಬೇಡಿ ಎಂದು ಸಹಜವಾಗಿ ಹೇಳುತ್ತಾರೆ. ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ ಎಂದರು.
ಮುಸ್ಲಿಮರಿಗೆ ಜ್ಞಾನ ಸಿಗುವ ವಿಚಾರ ಹೇಳುತ್ತೇನೆ. ಎಲ್ಲೂ ಕೂಡಾ ಹಿಂದೂ ಮುಸಲ್ಮಾನ ಗಲಾಟೆ ಆಗಿಲ್ಲ. ಈ ಬಾರಿ ಕುಂದಾಪುರದ ಪೊಲೀಸರು ಹೊಸ ವಿಷಯ ಸೇರಿಸಿದ್ದಾರೆ. ವಿಷಯ ಬಿಟ್ಟು ಬೇರೆ ಮಾತನಾಡಬೇಡಿ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಂಡ ಭಾರತದ ಕುರಿತು ನಾನು ಮಾತನಾಡುತ್ತಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತನಾಡಬೇಡಿ ಎಂದಿದ್ದಾರೆ. ಅವರಿಗೆ ನನ್ನ ಬಗ್ಗೆ ಹೆದರಿಕೆ ಇದೆ.
ಈ ಹಿಂದೆ ಕುಂದಾಪುರಕ್ಕೆ ಬಂದಾಗಲೂ ಅಡ್ಡಿಪಡಿಸಿದ್ದರು. ಈ ಬಾರಿ ಎನ್ಎಸ್ಯುಐ ಮೂಲಕ ಒತ್ತಾಯ ಹಾಕಿದ್ದಾರೆ. ನನಗೆ ವಾಕ್ ಸ್ವಾತಂತ್ರ್ಯ ಕೊಟ್ಟಿರುವುದು ಸಿದ್ದರಾಮಯ್ಯ ಅಲ್ಲ, ಅಂಬೇಡ್ಕರ್ ನೀಡಿದ ಸಂವಿಧಾನ ಅವಕಾಶ ನೀಡಿದೆ ಎಂದರು.
ಮಂಗಳೂರಿನಲ್ಲಿ ನಮ್ಮ ಹಿಂದೂಗಳು ಎಲ್ಲ ಮತ ಪಂಥದವರನ್ನು ಮದುವೆಯಾಗಲಿ ಎಂದಿದ್ದಕ್ಕೆ ಎಫ್ಐಆರ್ ಹಾಕಿದ್ದರು. ಸ್ಥಳೀಯ ಆಯೋಜಕರಿಗೆ ಒತ್ತಡ ಹೇರಲು ಹೀಗೆ ಮಾಡುತ್ತಾರೆ ಎಂದು ಸೂಲಿಬೆಲೆ ಕಿಡಿಕಾರಿದರು.