
ರಾಹುಲ್ ಗಾಂಧಿ ರಾಷ್ಟ್ರದ ಜನತೆಯ ಕ್ಷಮೆ ಕೇಳಲಿ
Wednesday, July 3, 2024
ರಾಹುಲ್ ಗಾಂಧಿ ರಾಷ್ಟ್ರದ ಜನತೆಯ ಕ್ಷಮೆ ಕೇಳಲಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಭರತ ಖಂಡದ ಮೂಲ ಅಸ್ಮಿತೆಯೇ ಸನಾತನ ಸಂಸ್ಕೃತಿ ಮತ್ತು ಹಿಂದೂ ಆಚರಣೆ. ಹಿಂದೂ, ಭಾರತದ ಮೂಲ ತತ್ವ, ಹಿಂದೂ ಎಂದರೆ ಸಹಿಷ್ಣುತೆ, ಉದಾರತೆ. ಅಂಥ ಪರಮೋಚ್ಛ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಷ್ಟ್ರದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್, ಹೈಕೋರ್ಟ್ ವಕೀಲ ಶ್ರೀನಿಧಿ ಹೆಗ್ಡೆ ಆಗ್ರಹಿಸಿದ್ದಾರೆ.
ಅನ್ಯ ಧರ್ಮದ ತುಷ್ಟೀಕರಣ ಮೂಲಕ ತಮ್ಮ ಓಟ್ ಬ್ಯಾಂಕ್ ಗಟ್ಟಿಗೊಳಿಸಲು ಹಿಂದೂಗಳ ಅವಹೇಳನ ಮಾಡಿ ತಾನೊಬ್ಬ ವಿರೋಧ ಪಕ್ಷದ ನಾಯಕ ಎಂಬ ಜವಾಬ್ದಾರಿಯನ್ನು ಮರೆತು ಲೋಕಸಭೆಯಲ್ಲಿ ತನ್ನ ಮೊದಲ ಭಾಷಣದಲ್ಲೇ ಬಾಲಿಶ ಮಾತುಗಳನ್ನಾಡಿ ಹಿಂದೂಗಳು ಎಂದರೆ 'ಹಿಂಸಾಚಾರ, ಅಸತ್ಯ ಮತ್ತು ದ್ವೇಷದಲ್ಲಿ ಮುಳುಗಿರುವವರು' ಎಂದು ರಾಹುಲ್ ಹೇಳಿರುವುದು ಅವರ ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿ.
ರಾಹುಲ್ ಗಾಂಧಿ ಈ ರೀತಿ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾರಂಭದಲ್ಲಿ ಹಿಂದೂ ಧರ್ಮದಲ್ಲಿ 'ಶಕ್ತಿ' ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ ಎಂದಿದ್ದರು.
ಅಷ್ಟೇ ಅಲ್ಲದೆ ತನ್ನ ಇಂಡಿ ಮೈತ್ರಿ ಕೂಟದ ನಾಯಕರು ಹಿಂದೂಗಳ ವಿರುದ್ಧ ಆಡಿರುವ ಮಾತುಗಳು ಅನೇಕ ಇವೆ.
ಡಿಎಂಕೆಯ ಸ್ಟಾಲಿನ್, ಎಸ್.ಪಿ ಹಾಗೂ ಆರ್.ಜೆಡಿ ನಾಯಕರು ಹಾಗೂ ತಮ್ಮ ಮೈತ್ರಿಯ ಭಾಗವಾದ ಮುಸ್ಲಿಂ ಲೀಗ್ ತನ್ನ ಮೆರವಣಿಗೆಯಲ್ಲಿ ಬಹಿರಂಗವಾಗಿ ಹಿಂದೂಗಳ ಶಿರಚ್ಛೇದ ಮಾಡುತ್ತೇವೆ ಎಂದಾಗಲೂ ತುಟಿ ಬಿಚ್ಚದವರು ಕಾಂಗ್ರೆಸ್ಸ್ ನಿಂದ ಇನ್ನು ಏನು ನಿರೀಕ್ಷಿಸಬಹುದು ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ.
ನಮ್ಮ ದೇವಾನುದೇವತೆಗಳ ಒಂದು ಕೈಯಲ್ಲಿ ಶಾಸ್ತ್ರವಿದ್ದರೆ, ಇನ್ನೊಂದು ಕೈಯಲ್ಲಿ ಶಸ್ತ್ರ ಇದೆ. ಧರ್ಮವನ್ನು ಅನುಸರಿಸದಿದ್ದರೆ ಅಂದರೆ ನ್ಯಾಯ ನೀತಿ ಮೀರಿ ನಡೆದರೆ ಶಸ್ತ್ರಾಸ್ತ್ರಗಳನ್ನು ಹಿಡಿದು ಶಿಕ್ಷೆ ನೀಡುವ ಉದ್ದೇಶ ನಮ್ಮ ದೇವರು ಮತ್ತು ದೇವತೆಗಳಿಗೆ ಅನಾದಿ ಕಾಲದಿಂದಲೂ ಇದೆ.
ಇದೆಲ್ಲ ವಿದೇಶಿ ನೆಲದ ಸಂಸ್ಕೃತಿಯ ನೆರಳಲ್ಲಿ ಬೆಳೆದವರಿಗೆ ತಿಳಿಯದು ಎಂದು ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.