
ಸರ್ಕಾರದ ನಿರ್ಧಾರ ಪುನರ್ ಪರಿಶೀಲಿಸಲು ಆಗ್ರಹ
Thursday, September 5, 2024
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ಹಿಂಪಡೆದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶವನ್ನು ಸರ್ಕಾರಿ ನೌಕರನಾಗಿ ಪಾಲಿಸಿದ್ದ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ಹಿಂಪಡೆಯುವ ಮೂಲಕ ರಾಜ್ಯ ಸರ್ಕಾರ ಬಹಳ ದೊಡ್ಡ ತಪ್ಪು ಮಾಡಿದೆ.
ಸಮಾನ ವಸ್ತ್ರ ಸಂಹಿತೆ ಜಾರಿಯ ಅಂಬೇಡ್ಕರ್ ಆಶಯದಂತೆ ಹಿಜಾಬ್ ನಿಷೇಧಿಸಲಾಗಿತ್ತು. ಹೈಕೋರ್ಟ್ ಆದೇಶವೂ ಅದಕ್ಕೆ ಪೂರಕವಾಗಿತ್ತು. ಸರ್ಕಾರಿ ಅಧಿಕಾರಿಯಾಗಿ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಕರ್ತವ್ಯ ನಿರ್ವಹಿಸಿದ್ದಾರೆ.
ರಾಜ್ಯ ಸರ್ಕಾರ ಕೋರ್ಟ್ ಆದೇಶವನ್ನು ಗೌರವಿಸುತ್ತದೆಯೋ ಅಥವಾ ತಮ್ಮ ಅಜೆಂಡಾವನ್ನು ಗೌರವಿಸುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ ಸಂಸದ ಕೋಟ, `ಉತ್ತಮ ಪ್ರಾಂಶುಪಾಲ' ಪ್ರಶಸ್ತಿಗೆ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಅವರನ್ನು ಆಯ್ಕೆ ಮಾಡಿದ್ದ ಸರಕಾರವೇ ಪ್ರಶಸ್ತಿ ಹಿಂಪಡೆದಿರುವುದು ನೋವಿನ ಸಂಗತಿ.
ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೋಟ ಆಗ್ರಹಿಸಿದ್ದಾರೆ.