-->
ವಿದ್ಯಾರ್ಥಿ ವೇತನ ವಿತರಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಜ್ಞಾನಸುಧಾ ಮಾದರಿ ಕಾರ್ಯ

ವಿದ್ಯಾರ್ಥಿ ವೇತನ ವಿತರಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಜ್ಞಾನಸುಧಾ ಮಾದರಿ ಕಾರ್ಯ

ಲೋಕಬಂದು ನ್ಯೂಸ್, ಕಾರ್ಕಳ
ಸಾಮಾನ್ಯವಾಗಿ ದೇವಸ್ಥಾನಗಳ ಬ್ರಹ್ಮಕುಂಭಾಭಿಷೇಕಗಳು ಒಂದಷ್ಟು ದುಂದು ವೆಚ್ಚ, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ, ಸನ್ಮಾನ ಇತ್ಯಾದಿಗಳಲ್ಲಿ ಮುಗಿದುಹೋಗುತ್ತದೆ.
ಆದರೆ, ಅದಕ್ಕೆ ವ್ಯತಿರಿಕ್ತವಾಗಿ ವಿದ್ಯಾರ್ಥಿ ವೇತನ, ಸೇನೆಗೆ ನೆರವು ಇತ್ಯಾದಿಗಳ ಮೂಲಕ ಆಚರಿಸಿ ಮಾದರಿಯಾಗಿ ಮೂಡಿಬಂದಿದೆ. ಅದೂ ಒಂದು ಶಿಕ್ಷಣ ಸಂಸ್ಥೆ!
ಗಣಿತನಗರದ ಜ್ಞಾನಸುಧಾ ಕಾರ್ಕಳ ಸಂಸ್ಥೆ ಈ ಅಪೂರ್ವ ಕಾರ್ಯಕ್ರಮ ಆಯೋಜಿಸಿದ, ಪ್ರಾಯಃ ಮೊತ್ತಮೊದಲ ವಿದ್ಯಾಸಂಸ್ಥೆ.


ಶ್ಲಾಘನೀಯ ಕಾರ್ಯ
ಶುಕ್ರವಾರ ಸಂಸ್ಥೆ ಆವರಣದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನಡೆದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಡಾ.ಸುಧಾಕರ್ ಶೆಟ್ಟಿ ಪರಿಕಲ್ಪನೆಯಲ್ಲಿ ಜ್ಞಾನಸುಧಾ ಸಂಸ್ಥೆ ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ. ಉತ್ತಮ ಫಲಿತಾಂಶದ ಮೂಲಕ ರಾಜ್ಯದ ಮಾದರಿ ಸಂಸ್ಥೆಯಾಗಿದೆ ಎಂದರು.


ದೊಡ್ಡ ಹೆಜ್ಜೆ
ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ, ಮೌಲ್ಯಗಳು ಮತ್ತು ಸಂಸ್ಕಾರ ಕೊಡುವಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ ಎಂದರು.


ಸಮಾಜಕ್ಕೆ ಕೊಡುಗೆ
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಉಪಕುಲಪತಿ ಪ್ರೊ. ಡಾ| ಪಿ.ಎಲ್.ಧರ್ಮ, ಯುವ ಮನಸುಗಳಲ್ಲಿ ದೇಶ ಪ್ರೇಮ ತುಂಬುವ ಕಾರ್ಯದ ಜೊತೆಗೆ ಜ್ಞಾನಸುಧಾ ಪರಿವಾರ ಅತ್ಯುತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾರ್ಯದಲ್ಲಿ ತನ್ನನ್ನು ಅರ್ಪಿಸಿಕೊಂಡಿದೆ ಎಂದರು.


ಸೇನೆಗೆ ನೆರವು
ಇದೇ ಸಂದರ್ಭದಲ್ಲಿ ಅಪರೇಷನ್ ಸಿಂದೂರ್ ಯಶಸ್ಸಿನ ಹಿನ್ನೆಲೆಯಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ 2 ಲಕ್ಷ ರೂ. ಮೊತ್ತವನ್ನು ಭಾರತೀಯ ಸೇನೆಗೆ ದೇಣಿಗೆಯಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಹಸ್ತಾಂತರಿಸಲಾಯಿತು.
ಸಾಧಕರಿಗೆ ಸನ್ಮಾನ
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್ ಅವರಿಗೆ ಟ್ರಸ್ಟ್ ವತಿಯಿಂದ 2 ಲಕ್ಷ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕೆ.ಸಿ.ಇ.ಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಗಳಿಸಿದ ತರುಣ್ ಸುರಾನ, ಜೆ.ಇ.ಇ ಮೈನ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲ್ಯೂಎಸ.್ ವರ್ಗದಲ್ಲಿ 1ನೇ ರ್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತ ಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲ್ಯೂ.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ್ಯಾಂಕ್ ಪಡೆದ ಮನೋಜ್ ಕಾಮತ್, ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಸಾಧಕರನ್ನೂ ಅಭಿನಂದಿಸಲಾಯಿತು.
1.05 ಕೋ. ವಿದ್ಯಾರ್ಥಿ ವೇತನ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 2024-25ರ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ 64 ಲಕ್ಷದ 2 ಸಾವಿರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 18 ಲಕ್ಷದ 78 ಸಾವಿರ, ಸಂಸ್ಥೆಯ ಉದ್ಯೋಗಿಗಳ ಮಕ್ಕಳ ಉಚಿತ ಶಿಕ್ಷಣಕ್ಕೆ 14 ಲಕ್ಷದ 87 ಸಾವಿರ, ಇಲಾಖಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಗಳಿಸುವ ಪ್ರತೀ ನೂರು ಅಂಕಗಳಿಗೆ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ತಲಾ ಒಂದು ಸಾವಿರದಂತೆ 7 ಲಕ್ಷದ 21 ಸಾವಿರ ಸೇರಿದಂತೆ ಒಟ್ಟು ರೂ. 1 ಕೋಟಿ 5 ಲಕ್ಷದಷ್ಟು ವಿದ್ಯಾರ್ಥಿ ವೇತನ ನೀಡಲಾಯಿತು.


ಗೌರವ ಸನ್ಮಾನ
ಈ ವರ್ಷ ಸಂಸ್ಥೆಯಲ್ಲಿ 10 ವರ್ಷಗಳ ಸೇವೆ ಪೂರ್ಣಗೊಳಿಸಿದ 10 ಮಂದಿ ಬೋಧಕ- ಬೋಧಕೇತರ ಸಿಬ್ಬಂದಿಗಳಿಗೆ ತಲಾ 10 ಸಾವಿರ ನಿಶ್ಚಿತ ಠೇವಣಿ ನೀಡಲಾಯಿತು.


ದೇವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡ ಭಗೀರಥ ಭಟ್ ಮತು ವಿಷ್ಣುಮೂರ್ತಿ ಭಟ್ ಹಾಗೂ ಶ್ರೀ ಮಹಾಗಣಪತಿ ದೇವಾಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಕಮಲಾಕ್ಷ ನಾಯಕ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.


ಪತ್ರಿಕೆ ಬಿಡುಗಡೆ
ಇದೇ ಸಂದರ್ಭದಲ್ಲಿ 2011ರಿಂದ 2025ರ ವರೆಗೆ ಜ್ಞಾನಸುಧಾ ಬೆಳೆದು ಬಂದ ದಾರಿಯ ಹೊತ್ತಗೆ ಅಗಣಿತ-ಸುಧಾಸ್ಪರ್ಷ ಹಾಗೂ ಜ್ಞಾನಸುಧಾ ಪತ್ರಿಕೆ 39ನೇ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article