
ಪರಿಸರ ಸಾರ್ವಜನಿಕ ಆಲಿಕೆ ಸಭೆ
Thursday, May 29, 2025
ಲೋಕಬಂಧು ನ್ಯೂಸ್, ಬ್ರಹ್ಮಾವರ
ಕರ್ನಾಟಕ ಕರಾವಳಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತವಾಗಿ ತಂಗಲು ಆಶ್ರಯ ಕಲ್ಪಿಸಲು ಸಿಮೆಂಟ್, ಖಾದ್ಯತೈಲ ಮತ್ತು ಕೃಷಿ ಉತ್ಪನ್ನ ಹಾಗೂ ಇತರ ವಾಣಿಜ್ಯ ಸರಕುಗಳನ್ನು ನಿರ್ವಹಿಸಲು, ಸುರಕ್ಷಿತ ಆಶ್ರಯ ಮತ್ತು ಸಂಗ್ರಹಣೆಗಾಗಿ ಹಂಗಾರಕಟ್ಟೆಯ 1.62 ಹೆಕ್ಟೇರ್ ಪ್ರದೇಶದಲ್ಲಿ ಕೋಸ್ಟಲ್ ಬರ್ತ್ ಕರ್ನಾಟಕ ಜಲಸಾರಿಗೆ ಮಂಡಳಿ, ಬಂದರು ಮತ್ತು ಮೀನುಗಾರಿಕೆ ವಿಭಾಗ ಸಾಗರಮಾಲ ಯೋಜನೆಯಡಿ ಅಭಿವೃದ್ಧಿಪಡಿಸುವ ಕುರಿತು ಪರಿಸರ ಸಾರ್ವಜನಿಕ ಆಲಿಕೆ ಸಭೆ ಬುಧವಾರ ಹಂಗಾರಕಟ್ಟೆ ಫಿಶರೀಶ್ ಜೆಟ್ಟಿ ಸಮೀಪದ ಹರಾಜು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತಾವಿತ ಯೋಜನೆಯ ಉದ್ದೇಶ ಕುರಿತು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದರು.
ನಂತರ ಯೋಜನಾದಾರರು ಯೋಜನೆ ಬಗ್ಗೆ ಪ್ರದರ್ಶನ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಅಭಿಪ್ರಾಯ, ಅನಿಸಿಕೆ ಹಾಗೂ ಅಹವಾಲು ಸ್ವೀಕರಿಸಲಾಯಿತು.
ಸಭೆಯಲ್ಲಿ ಮೀನುಗಾರರ ಸಂಘದವರು ಹಾಗೂ ಬಂದರು ಅಭಿವೃದ್ಧಿ ಸಮಿತಿಯ ಸಂಘದವರು ಪ್ರಸ್ತಾಪಿತ ಯೋಜನೆಯ ಅಭಿವೃದ್ಧಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರಸ್ತಾಪಿತ ಸ್ಥಳದಲ್ಲಿ ಮೀನುಗಾರರ ದೋಣಿ ನಿಲುಗಡೆಗೂ ಮಾಡಲು ಅವಕಾಶ ಮಾಡಕೊಡುವಂತೆ, ಅಳಿವೆಯಲ್ಲಿ 3.5 ಮೀ.ಗಿಂತ ಹೆಚ್ಚಿನ ಹೂಳು ತೆಗೆಯದಂತೆ, ಬ್ರೇಕ್ ವಾಟರ್ ನಿರ್ಮಿಸಲು ಹಾಗೂ ಪರಿಸರದ ವಾಸದ ಕುಟುಂಬಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಯೋಜನೆ ರೂಪಿಸಲು ಮನವಿ ಮಾಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್, ಹಂಗಾರಕಟ್ಟೆ ಬೇಂಗ್ರೆ ಮೀನುಗಾರರ ಸಂಘದ ಅಧ್ಯಕ್ಷ ರಾಜು ಬಂಗೇರ, ಹಂಗಾರಕಟ್ಟೆ ಬೆಂಗ್ರೆ ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಸಮಿತಿ ಸಲಹೆಗಾರರಾದ ಕೇಶವ ಕುಂದರ್, ಶಂಕರ್ ಬಂಗೇರ ಹಾಗೂ ಉತ್ತರ ಕರ್ಕೇರ ಉಪಸ್ಥಿತರಿದ್ದರು.