
ಸಂಘಟನಾ ಕಾರ್ಯಕ್ಕೆ ಹೆರಂಜೆ ಕೃಷ್ಣ ಭಟ್ ಮಾದರಿ
Friday, May 16, 2025
ಲೋಕಬಂಧು ನ್ಯೂಸ್, ಉಡುಪಿ
ಸಂಘಟನಾ ಕಾರ್ಯಕ್ಕೆ ಪ್ರೊ. ಹೆರಂಜೆ ಕೃಷ್ಣ ಭಟ್ ಮಾದರಿಯಾಗಿದ್ದರು. ಅತ್ಯಂತ ಜವಾಬ್ದಾರಿಯಿಂದ ಅವರು ಎಲ್ಲ ಕೆಲಸವನ್ನೂ ನಿಭಾಯಿಸುತ್ತಿದ್ದರು. ಎಲ್ಲರೂ ಅವರನ್ನು ಮಿತಭಾಷಿ ಎನ್ನುತ್ತಾರೆ. ಆದರೆ, ನಮ್ಮೊಂದಿಗೆ ಗಂಟೆಗಳ ಕಾಲ ವಿವಿಧ ವಿಚಾರ ವಿಷಯಗಳಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು. 'ನಿಷ್ಠುರಕ್ಕೆ ಕೃಷ್ಣ ಭಟ್ಟರು' ಎಂದು ನಾವು ಕರೆಯುತ್ತಿದ್ದೆವು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಇತ್ತೀಚೆಗೆ ನಿಧನರಾದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ, ಸಂಘಟಕ ಪ್ರೊ. ಹೆರಂಜೆ ಕೃಷ್ಣ ಭಟ್ ಸ್ಮರಣಾರ್ಥ ಕೃಷ್ಣಮಠ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ವತಿಯಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸಂತಾಪ ಸಂದೇಶ ನೀಡಿದರು.
ಸೋಲು ಮತ್ತು ಗೆಲುವು ಯಾವುದನ್ನೂ ಯೋಚಿಸಬೇಡ. ಮಾಡುವ ಕರ್ತವ್ಯದಲ್ಲಿ ಕೇಂದ್ರೀಕೃತವಾಗಿರು. ಅದರಿಂದ ಕರ್ಮಯೋಗಿಯಾಗಲು ಸಾಧ್ಯ ಎಂದು ಕುರುಕ್ಷೇತ್ರದಲ್ಲಿ ಹತಾಶನಾಗಿ ಕುಳಿತಿದ್ದ ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ಮಾಡಿದ್ದ. ಅದರಂತೆಯೇ ಹೆರಂಜೆ ಕೃಷ್ಣ ಭಟ್ಟ ನಿಶ್ಯಬ್ದವಾಗಿ ತಮ್ಮ ಕಾರ್ಯದಲ್ಲಿ ತೊಡಗುತ್ತಿದ್ದರು. ಕೃಷ್ಣನ ಮಾತಿನಂತೆ ನಿಜಕ್ಕೂ ಅವರೊಬ್ಬ ಕರ್ಮಯೋಗಿ ಎಂದು ಬಣ್ಣಿಸಿದ ಶ್ರೀಪಾದರು ಅವರ ಅಗಲಿಕೆ ನಮಗೂ, ಪುತ್ತಿಗೆ ಮಠಕ್ಕೂ ವೈಯಕ್ತಿಕವಾಗಿ ಭಾರಿ ನಷ್ಟವಾಗಿದೆ ಎಂದರು.
ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹೆರಂಜೆ ಭಟ್ ಕುರಿತು ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊ. ಎಂ.ಎಲ್. ಸಾಮಗ, ಡಾ.ಪಾದೆಕಲ್ಲು ವಿಷ್ಣು ಭಟ್, ಡಾ. ಎಂ.ಪ್ರಭಾಕರ ಜೋಶಿ, ಡಾ. ಕೆ.ಪಿ. ರಾವ್, ರಾಘವ ನಂಬಿಯಾರ್, ಡಾ. ಭಾಸ್ಕರಾನಂದ ಕುಮಾರ್, ಪ್ರದೀಪ ಕಲ್ಕೂರ, ಡಾ. ಹರಿರಾಮ ಆಚಾರ್ಯ, ಡಾ.ಎನ್.ಟಿ. ಭಟ್ ನುಡಿನಮನ ಸಲ್ಲಿಸಿದರು.
ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ವ್ಯವಹಾರಗಳ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಹಿತೋಷ ಆಚಾರ್ಯ, ರಮೇಶ ಭಟ್, ಡಾ. ಬಿ.ಗೋಪಾಲ ಆಚಾರ್ಯ ಹಾಗೂ ಹೆರಂಜೆ ಕೃಷ್ಣ ಭಟ್ ಅಭಿಮಾನಿಗಳು ಪಾಲ್ಗೊಂಡಿದ್ದರು.
ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.