ಯಕ್ಷಗಾನ ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರದು
Saturday, May 31, 2025
ಲೋಕಬಂಧು ನ್ಯೂಸ್, ಉಡುಪಿ
ಯಕ್ಷಗಾನ ತನ್ನ ಸಾಂಪ್ರದಾಯಿಕ ಚೌಕಟ್ಟು ಮೀರುತ್ತಿರುವ ಈ ದಿನಗಳಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯಕ್ಷಗಾನ ಕಲಾವಿದರ ಮೇಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣಮಠ ಆಶ್ರಯದಲ್ಲಿ ಶನಿವಾರ ಉಡುಪಿ ಯಕ್ಷಗಾನ ಕಲಾರಂಗದ ಸುವರ್ಣ ಸಡಗರ ಪ್ರಯುಕ್ತ ಹಮ್ಮಿಕೊಂಡಿರುವ ಯಕ್ಷಗಾನ ಕಲಾವಿದರ ಸಮಾವೇಶಕ್ಕೆ ಪೂರಕವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ನಡೆದ `ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಭ್ಯಾಗತರಾಗಿದ್ದ ಉದ್ಯಮಿ ಗೋಪಾಲ ಸಿ. ಬಂಗೇರ, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ ಮತ್ತು ಪ್ರೊ. ಸದಾಶಿವ ರಾವ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಇದ್ದರು.
ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ಸದಸ್ಯ ಸತೀಶ್ ಹಡಪ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೇರಳ ತ್ರಿಶೂರಿನ ಮಾಧವ ಮಾತೃಗ್ರಾಮಂ ಕೂಡಿಯಾಟ್ಟಂ ಗುರುಕುಲಂ ವತಿಯಿಂದ `ಸೀತಾಪಹರಣಂ -ಜಟಾಯು ವಧಂ' ಕೂಡಿಯಾಟ್ಟಂ ಪ್ರದರ್ಶನ ನಡೆಯಿತು.
ನಂತರ `ಕಲೆ ಪೂರ್ಣಾವಧಿ ಉದ್ಯೋಗವಾಗಬೇಕೇ? ಉಪವೃತ್ತಿಯಾಗಬೇಕೇ? ವಿಷಯದಲ್ಲಿ ಚರ್ಚೆ ನಡೆಯಿತು.
ಮಣಿಪಾಲ ಕೆಎಂಸಿ ವತಿಯಿಂದ ಕಲಾವಿದರಿಗಾಗಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.