ಉಡುಪಿ ಗಾಂಧಿ ಆಸ್ಪತ್ರೆಗೆ ಮೂವತ್ತು, ಪಂಚಮಿ ಟ್ರಸ್ಟ್‌ 25ರ ಸಂಭ್ರಮ

ಲೋಕಬಂಧು ನ್ಯೂಸ್
ಉಡುಪಿ: ಇಲ್ಲಿನ ಗಾಂಧಿ ಆಸ್ಪತ್ರೆಗೆ ಮೂವತ್ತು ವರ್ಷ ಹಾಗೂ ಪಂಚಮಿ ಟ್ರಸ್ಟ್‌ನ 25ನೇ ವರ್ಷದ ಸಂಭ್ರಮಾಚಾರಣೆ ಮೇ 4 ಹಾಗೂ 5ರಂದು ಆತ್ರಾಡಿ ಓಂತಿಬೆಟ್ಟು ಮದಗದಲ್ಲಿ ನಡೆಯಲಿದೆ ಎಂದು ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ತಿಳಿಸಿದ್ದಾರೆ.
ಮೇ 4ರಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಸಂಜೆ 5 ಗಂಟೆಗೆ ಆತ್ರಾಡಿಯಲ್ಲಿ ಬನ್ನಂಜೆ ರಾಘವೇಂದ್ರ ರಾವ್ ಮತ್ತು ರವಿ ಕೂಳೂರ್ ಶಿಷ್ಯರಿಂದ ಕೊಳಲು ವಾದನ ನಡೆಯಲಿದೆ. 5.55ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು.
ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್, ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಮಿತ್ರ ಸಮಾಜ ಹೋಟೆಲ್ ಆಡಳಿತ ನಿರ್ದೇಶಕ ಎನ್. ಅಚ್ಯುತ ಹೊಳ್ಳ ಆಗಮಿಸುವರು.
ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿರುವರು.


ಸಭಾ ಕಾರ್ಯಕ್ರಮದ ಬಳಿಕ ಗುರುವಾಯೂರಿನ ಗಂಗಾ ಶಶಿಧರನ್ ವಯೋಲಿನ್ ಕಛೇರಿ ನಡೆಯಲಿದೆ.
ಮೇ 5ರ ಸಂಜೆ ಗಾಂಧಿ ಆಸ್ಪತ್ರೆಯಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಆಪರೇಷನ್ ಥಿಯೇಟರ್ ಉದ್ಘಾಟನೆಗೊಳ್ಳಲಿದೆ. ಬಳಿಕ ಆತ್ರಾಡಿಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಏನಪೋಯ ವಿಶ್ವವಿದ್ಯಾನಿಲಯದ ಪ್ರೊ.ಚಾನ್ಸೆಲರ್ ಡಾ.ಎಂ.ವಿಜಯಕುಮಾರ್, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಐಎಂಎ ಉಡುಪಿ- ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ ಅಭ್ಯಾಗತರಾಗಿ ಆಗಮಿಸುವರು.
ಗಾಂಧಿ ಆಸ್ಪತ್ರೆಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಎಂ.  ಹರಿಶ್ಚಂದ್ರ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿರುವರು.


ಬಳಿಕ ದೆಹಲಿಯ ಪ್ರಸಿದ್ದ ಮಿರಾಕಲ್ ಅನ್ ವ್ಹೀಲ್ ಸಂಸ್ಥೆ ಕಲಾವಿದರಿಂದ ವ್ಹೀಲ್ ಚೇರ್ ನೃತ್ಯ ಪ್ರದರ್ಶನ ನಡೆಯಲಿದೆ.