ಲೋಕಬಂಧು ನ್ಯೂಸ್, ಉಡುಪಿ
ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಅಂಗವಾಗಿ ನಡೆಯುವ ಪರ್ಯಾಯ ಪೂರ್ವ ವಿಧಿಗಳಲ್ಲಿ ಕೊನೆಯದಾದ ಧಾನ್ಯ ಮುಹೂರ್ತ ಡಿ.14ರಂದು ಬೆಳಿಗ್ಗೆ 7.45ರ ಧನುರ್ಲಗ್ನ ಸುಮಹೂರ್ತದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನ ಡಾ.ಉದಯ ಸರಳತ್ತಾಯ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಬ್ರಹ್ಮ ಕೃಷ್ಣನ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದೂ ಉಡುಪಿಗೆ ವಿಶಿಷ್ಟವಾದುದು. ಈ ಹಿನ್ನೆಲೆಯಲ್ಲಿ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಕಟ್ಟಿಗೆ ಮುಹೂರ್ತ, ಅಕ್ಕಿ ಮುಹೂರ್ತದ ತರುವಾಯ ಧಾನ್ಯ (ಭತ್ತ) ಮುಹೂರ್ತ ನಡೆಸುವುದು ಸಂಪ್ರದಾಯ.
ಭಕ್ತರಿಗೆ ಸದವಕಾಶ
ಅರಳು ಮತ್ತು ಅಕ್ಕಿಗಾಗಿ ಭತ್ತ ಸಂಗ್ರಹಣೆ ಈ ಕಾರ್ಯಕ್ರಮದ ಹಿಂದಿನ ಆಶಯ. ಜೊತೆಗೆ ಸಂಗ್ರಹಿಸಿದ ಭತ್ತವನ್ನು ಕೃಷ್ಣಮಠದ ಬಡಗುಮಾಳಿಗೆಯಲ್ಲಿ ದಾಸ್ತಾನು ಮಾಡುವ ಮೂಲಕ ಒಂದರ್ಥದಲ್ಲಿ ಭಾವಿ ಪರ್ಯಾಯ ಮಠದವರು ಕೃಷ್ಣಮಠ ಪ್ರವೇಶಿಸುವ ಸಂದರ್ಭವೂ ಆಗಿದೆ. ಜೊತೆಗೆ ಭಕ್ತರು ತಾವು ಬೆಳೆದ ಫಸಲಿನ ಒಂದಂಶವನ್ನು ಭಗವಂತನಿಗೆ ಸಮರ್ಪಿಸಿ, ಕೃತಾರ್ಥರಾಗಲು ಇದೊಂದು ಸದವಕಾಶ ಎಂದು ಡಾ.ಸರಳತ್ತಾಯ ವಿವರಿಸಿದರು.
ಡಿ.14ರಂದು ಬೆಳಿಗ್ಗೆ 6.45 ಗಂಟೆಗೆ ಶೀರೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಚಂದ್ರೇಶ್ವರ- ಅನಂತೇಶ್ವರ ಹಾಗೂ ಶ್ರೀಕೃಷ್ಣ- ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ, ನವಗ್ರಹ ಹಾಗೂ ವೃಂದಾವನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮತ್ತೆ ಶೀರೂರು ಮಠಕ್ಕೆ ಆಗಮಿಸಲಾಗುವುದು.
ಕಟ್ಟಿಗೆ ರಥದ ಶಿಖರ ಕಲಶ ಪ್ರತಿಷ್ಠೆ
ಚಿನ್ನದ ಪಲ್ಲಕಿಯಲ್ಲಿ ಭತ್ತದ ಮುಡಿ ಸಹಿತ ಭಕ್ತರು ಸುಮಾರು 300 ಭತ್ತದ ಮುಡಿಗಳನ್ನು ಹೊತ್ತುಕೊಂಡು ರಥಬೀದಿಯಲ್ಲಿ ಒಂದು ಪ್ರದಕ್ಷಿಣೆ ಬಳಿಕ ಸುಮುಹೂರ್ತದಲ್ಲಿ ಕೃಷ್ಣಮಠದ ಬಡಗುಮಾಳಿಗೆಯಲ್ಲಿ ಇರಿಸಲಾಗುವುದು. ಬಳಿಕ ಕಟ್ಟಿಗೆ ರಥದ ಶಿಖರ ಕಲಶ ಪ್ರತಿಷ್ಠೆಯೂ ನಡೆಯಲಿದೆ ಎಂದರು.
ಜ.9ರಂದು ಪುರಪ್ರವೇಶ
ಮುಂಬರುವ ಜ.18ರಂದು ಪರ್ಯಾಯ ಸರ್ವಜ್ಞ ಪೀಠವೇರಿ ದ್ವೈವಾರ್ಷಿಕ ಕೃಷ್ಣ ಪೂಜಾ ಪರ್ಯಾಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪ್ರಸ್ತುತ ತೀರ್ಥಕ್ಷೇತ್ರ ಸಂದರ್ಶನದಲ್ಲಿದ್ದು, ಜ.9ರಂದು ಪುರಪ್ರವೇಶ ಮಾಡುವರು. ಅಂದು ಅಪರಾಹ್ನ 3.30 ಗಂಟೆಗೆ ಕಡಿಯಾಳಿಯಿಂದ ಕೃಷ್ಣ ಮಠ ವರೆಗೆ ವೈಭವದ ಮೆರವಣಿಗೆ ಮೂಲಕ
ಸ್ವಾಗತಿಸಲಾಗುವುದು. ರಥಬೀದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಉಡುಪಿ ನಗರಸಭೆ ವತಿಯಿಂದ ಪೌರಸಂಮಾನ ನಡೆಯಲಿದೆ. ಎಂದು ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಜ.9ರಿಂದ 17ರ ವರೆಗೆ ರಥಬೀದಿಯ ಪೇಜಾವರ ಮಠ ಎದುರು ನಿರ್ಮಿಸಲಾಗುವ ಪೂರ್ಣಪ್ರಜ್ಞ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ನಗರಾಲಂಕಾರ
ಶಾಸಕ ಯಶಪಾಲ್ ಸುವರ್ಣ ನೇತೃತ್ವದ ಪರ್ಯಾಯ ಸ್ವಾಗತ ಸಮಿತಿ ಮಹೋತ್ಸವದ ಯಶಸ್ಸಿಗೆ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ. ನಗರಸಭೆ ವತಿಂದ ವಿದ್ಯುದ್ದೀಪಗಳ ನಗರಾಲಂಕಾರ ಮಾಡಲಾಗುವುದು ಎಂದು ಮಟ್ಟಾರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ಮೋಹನ ಭಟ್, ಮಧುಕರ ಮುದ್ರಾಡಿ ಹೊರೆಕಾಣಿಕೆ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ ಜೈನ್ ಹಾಗೂ ವಾಸುದೇವ ಆಚಾರ್ಯ ಇದ್ದರು.
