-->
ಮಾದಕ ವ್ಯಸನ ಜಾಗತಿಕ ಸಮಸ್ಯೆ

ಮಾದಕ ವ್ಯಸನ ಜಾಗತಿಕ ಸಮಸ್ಯೆ

ಲೋಕಬಂಧು ನ್ಯೂಸ್, ಉಡುಪಿ
ಮಾದಕ ವ್ಯಸನಗಳು ಜಾಗತಿಕ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ದೊಡ್ಡ ಆಂದೋಲನದ ಅಗತ್ಯವಿದೆ ಎಂದು ಮಣಿಪಾಲ ಮಾಹೆ ಉಪ ಕುಲಾಧಿಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್‌ ಹೇಳಿದರು.ಮಣಿಪಾಲ ಮಾಹೆ, ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಗುರುವಾರ‌ ನಡೆದ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು.


ಈ ದಿನದ ಪ್ರಮುಖ ಉದ್ದೇಶ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಎಂದರು.


ಡಾ.ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.


ಮುಖ್ಯ ಅತಿಥಿಯಾಗಿದ್ದ ಪ್ರಾಂಶುಪಾಲೆ ಲೀಲಾಬಾಯಿ ಭಟ್, ಯುವ ಜನತೆ ದೇಶದ ಆಸ್ತಿ. ಅವರು ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.


ಮುಖ್ಯ ಅತಿಥಿಯಾಗಿದ್ದ ಎಸ್‌ಪಿ ಹರಿರಾಮ್ ಶಂಕರ್, ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ದುಶ್ಚಟಗಳಿಗೆ ಒಮ್ಮೆ ಬಲಿ ಬಿದ್ದರೆ ಬದುಕಿನಲ್ಲಿ ಎದ್ದುಬರಲು ಕಷ್ಟ ಸಾಧ್ಯ. ಈ ಬಗ್ಗೆ ಜಾಗೃತರಾಗಿರಬೇಕು ಎಂದರು.


ಡಾ ಗೀತಾ ಮಯ್ಯ, ಡಾ.ಅರವಿಂದ್ ಕುಮಾ‌ರ್ ಪಾಂಡೆ, ಡಾ.ರಶ್ಮಿ ಯೋಗೇಶ್ ಪೈ, ಡಾ.ರೀನಾ ಪರ್ವಿನ್ ಇದ್ದರು.


ಕಾರ್ಯಾಗಾರದಲ್ಲಿ ಉಡುಪಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಎನ್.ಎಸ್.ಎಸ್./ಎನ್.ಸಿ.ಸಿ, ಸೌಟ್ಸ್ ಆ್ಯಂಡ್ ಗೈಡ್ಸ್‌ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ 373 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಅವರಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಮಾದಕ ದ್ರವ್ಯ ವ್ಯಸನಿಯನ್ನು ಗುರುತಿಸುವ ಬಗೆ, ಕಾನೂನು ಚೌಕಟ್ಟಿನಲ್ಲಿ ಮಾದಕ ದ್ರವ್ಯ ವ್ಯಸನದಿಂದ ಎದುರಾಗುವ ಸಮಸ್ಯೆಗಳು, ಮಾದಕ ದ್ರವ್ಯ ವ್ಯಸನದಿಂದ ಹೊರಬರುವಲ್ಲಿ ನಮ್ಮ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು.

Ads on article

Advertise in articles 1

advertising articles 2

Advertise under the article