ಗಿನ್ನಿಸ್ ದಾಖಲೆ ನಿರ್ಮಿಸಿದ 'ಜಲವೇ ಜೀವ'
Thursday, June 19, 2025
ಲೋಕಬಂಧು ನ್ಯೂಸ್, ಬೆಂಗಳೂರು
ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನೀರಿನ ಸಂರಕ್ಷಣೆಗಾಗಿ ನಡೆಸಿದ್ದ ‘ಜಲವೇ ಜೀವ’ ಅಭಿಯಾನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಗುರುವಾರ ನಗರದಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆಯಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗಿನ್ನಿಸ್ ತಂಡದಿಂದ ಗಿನ್ನಿಸ್ ವಿಶ್ವ ದಾಖಲೆ ಅಧಿಕೃತ ಪ್ರಮಾಣಪತ್ರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಕಟ್ಟಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆ ಬೃಹದಾಕಾರವಾಗಿ ಬೆಳೆದಿರುವ ಕಾರಣಕ್ಕೆ ಗ್ರೇಟರ್ ಬೆಂಗಳೂರು ಆಗಿ ಪರಿವರ್ತನೆ ಮಾಡಿದ್ದೇವೆ.
ಜಲಮಂಡಳಿ ಕಳೆದ 10 ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ವರ್ಷಕ್ಕೆ ಸುಮಾರು 400ರಿಂದ 500 ಕೋಟಿ ರೂ. ನಷ್ಟ ಆಗುತ್ತಿದೆ ಎಂಬ ಮಾಹಿತಿಯಿದೆ.
ಜಲಮಂಡಳಿಗೆ ವಾರ್ಷಿಕವಾಗಿ ನಷ್ಟವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಯಾರಿಗೂ ತೊಂದರೆ ಆಗದಂತೆ ದರ ಪರಿಷ್ಕರಣೆ ಮಾಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿಗೊಳಿಸುವ ಸಂದರ್ಭ ಹಲವು ಸವಾಲುಗಳು ಎದುರಾದವು. ಸುಮಾರು 2 ಕೋಟಿ ಜನಸಂಖ್ಯೆಗೆ ಶುದ್ಧ ನೀರು ಒದಗಿಸಲು ಕಾವೇರಿ 6ನೇ ಹಂತದ ಡಿಪಿಆರ್ ಸಿದ್ಧತೆ ನಡೆಸಲಾಗುತ್ತದೆ.
ಅಲ್ಲಲ್ಲಿ ಕಾವೇರಿ ನೀರಿನ ದುರ್ಬಳಕೆಯೂ ಆಗುತ್ತಿದೆ. ಶೇ.30ರಷ್ಟು ಜನರು ಕಾವೇರಿ ನೀರಿನ ಶುಲ್ಕ ಪಾವತಿಸುವುದಿಲ್ಲ. ಜಲಮಂಡಳಿ ವತಿಯಿಂದ ಆಯೋಜಿಸಿದ್ದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಜಲಮಂಡಳಿಯವರಿಗೆ ಜವಾಬ್ದಾರಿಯನ್ನು ವಹಿಸಿದ್ದೆ. ಜಲಮಂಡಳಿ ಅಧ್ಯಕ್ಷ ವಿ. ರಾಮ್ಪ್ರಸಾದ್ ಮನೋಹರ್ ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದರು.
ಮನುಷ್ಯ, ಪ್ರಾಣಿಗಳು ಸೇರಿದಂತೆ ಪ್ರತಿಯೊಂದು ವರ್ಗದವರಿಗೂ ನೀರು ಅತ್ಯಗತ್ಯ. ಗಂಗೆಯನ್ನು ಉಳಿಸಲು 5 ಲಕ್ಷಕ್ಕೂ ಹೆಚ್ಚು ಜನರು ಜಲಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿ, ಮತ್ತೊಬ್ಬರಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ನಾವೆಲ್ಲರೂ ಸೇರಿ ಪರಿಸರ ಉಳಿಸುವ ಕೆಲಸ ಮಾಡಿದಾಗ ನೀರಿನ ಮಟ್ಟ ಹೆಚ್ಚಾಗುತ್ತದೆ.
ಪರಿಸರ ಸಂರಕ್ಷಣೆಗಾಗಿ ಶಾಲೆಗಳಲ್ಲಿ ಪರಿಸರ ಜಾಗೃತಿ ಕ್ಲಬ್ ರಚಿಸಲಾಗುತ್ತಿದೆ. ಮಕ್ಕಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು.
ಅತ್ಯಂತ ಕಡಿಮೆ ಸಮಯದಲ್ಲಿ ಜಲ ಸಂರಕ್ಷಣೆ ಪ್ರತಿಜ್ಞೆ ಸ್ವೀಕರಿಸಿ, ಗಿನ್ನಿಸ್ ವಿಶ್ವ ದಾಖಲೆಯ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಡಿಕೆಶಿ ತಿಳಿಸಿದ್ದಾರೆ.