ಬೆಳ್ಮಣ್ಣಿನಲ್ಲಿ ಗೃಹ ಸಚಿವರಿಂದ ಚಂಡಿಕಾ ಹೋಮ
Wednesday, July 9, 2025
ಲೋಕಬಂಧು ನ್ಯೂಸ್, ಕಾರ್ಕಳ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವಾರೂಪವಾಗಿ ಜು.8ರಂದು ಮಹಾ ಚಂಡಿಕಾ ಯಾಗ ಹಾಗೂ ಮಹಾಪೂಜೆ ನಡೆಸಿದರು.ಕ್ಷೇತ್ರದ ಆಡಳಿತ ಮೊಕ್ತೇಸರ, ಜ್ಯೋತಿಷಿ ವೇ.ಮೂ. ಬಿ.ವಿಘ್ನೇಶ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾ ಚಂಡಿಕಾಯಾಗ, ಅನ್ನ ಸಂತರ್ಪಣೆ ನಡೆಯಿತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಪತ್ನೀಕರಾಗಿ ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆಯ ಕಾರಣವನ್ನು ಗೌಪ್ಯವಾಗಿಡಲಾಗಿತ್ತು.
ಶತ್ರುಬಾಧೆ ನಿವಾರಣಾರ್ಥ ಈ ಪೂಜೆ ನಡೆಸಲಾಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗ್ಯಾರೂ ಶತ್ರುಗಳಿಲ್ಲ, ಎಲ್ಲರೂ ನನ್ನ ಮಿತ್ರರೇ ಎಂದರಲ್ಲದೆ ಲೋಕ ಕಲ್ಯಾಣಾರ್ಥವಾಗಿ ಪೂಜೆ ನಡೆಸಲಾಗಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಡಲಿಲ್ಲ.
ಅವರು ಬೆಳಿಗ್ಗೆ 7.30ಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದು ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಕರುಣಾಕರ ಶೆಟ್ಟಿ ಪೆನಿನ್ಸುಲಾ, ಪರ್ವತ್ ಶೆಟ್ಟಿ ಬೋಳ, ಬೋಳ ಅವಿನಾಶ್ ಮಲ್ಲಿ, ದೀಪಕ್ ಕೋಟ್ಯಾನ್, ಪ್ರದೀಪ್ ಬೇಲಾಡಿ, ಗೋಪಿನಾಥ ಭಟ್ ಇದ್ದರು.
ಬಳಿಕ ಸಚಿವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು.