Ujire: ಧರ್ಮಸ್ಥಳಕ್ಕೆ ಕ್ಷೇತ್ರ ರಕ್ಷಾ ಯಾತ್ರೆ
Tuesday, September 9, 2025
ಲೋಕಬಂಧು ನ್ಯೂಸ್, ಉಜಿರೆ
ಲಕ್ಷಾಂತರ ಮಂದಿ ಸರ್ವ ಧರ್ಮೀಯರ ಶ್ರದ್ಧಾ ಭಕ್ತಿಯ ಕೇಂದ್ರವಾದ ಧರ್ಮಸ್ಥಳ ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಮಾದರಿಯಾಗಿ ಪ್ರೇರಕ ಶಕ್ತಿಯಾಗಿದ್ದು, ಅತಿಶಯ ಕ್ಷೇತ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಧರ್ಮಸ್ಥಳಕ್ಕೆ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ಶ್ರೀ ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಹಾಗೂ ತಮ್ಮ ಭಕ್ತರೊಂದಿಗೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ದೇವರ ದರ್ಶನದ ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಅವರನ್ನು ಡಿ.ಹರ್ಷೇಂದ್ರ ಕುಮಾರ್ ಗೌರವಿಸಿದರು. ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.
ನಂತರ ಪ್ರವಚನ ಮಂಟಪದಲ್ಲಿ ಆಶೀರ್ವಚನ ನೀಡಿದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಧಾರ್ಮಿಕ ಶ್ರದ್ಧಾಕೇಂದ್ರಗಳ ರಕ್ಷಣೆ ಭಕ್ತರ ಕರ್ತವ್ಯ ಹಾಗೂ ಹೊಣೆಯಾಗಿದೆ. ನಾವೆಲ್ಲರೂ ನ್ಯಾಯ, ನೀತಿ ಹಾಗೂ ಧರ್ಮ ಮಾರ್ಗದಲ್ಲಿ ನಡದಾಗ ಅನ್ಯಾಯ, ಅಧರ್ಮ, ಅಪಪ್ರಚಾರಕ್ಕೆ ಸೋಲು ಖಚಿತ.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಪಪ್ರಚಾರ ಹಾಗೂ ವದಂತಿಗಳು ಗ್ರಹಣದಂತೆ ಕ್ಷಣಿಕವಾಗಿದ್ದು ಅವುಗಳನ್ನು ಕಡೆಗಣಿಸಬೇಕು. ಎಂಟು ಶತಮಾನಗಳಿಂದ ಸರ್ವಧರ್ಮೀಯರ ಶ್ರದ್ಧಾ ಭಕ್ತಿಯ ಕೇಂದ್ರವಾದ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ನಾವೆಲ್ಲರೂ ಸಿದ್ಧರಾಗಿ, ಬದ್ಧರಾಗಿ ಹೆಗ್ಗಡೆಯವರ ಜೊತೆಗಿದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು.
ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳ ಹಾಗೂ ಎಡನೀರು ಮಠಕ್ಕೆ ಅವಿನಾಭಾವ ಸಂಬಂಧವಿದೆ. ಸ್ವಾಮೀಜಿಯವರಿಗೆ ಧರ್ಮಸ್ಥಳದ ಬಗ್ಗೆ ವಿಶೇಷ ಗೌರವ, ಅಭಿಮಾನ ಹಾಗೂ ಪ್ರೀತಿ ವಿಶ್ವಾಸವಿದೆ. ಸ್ವಾಮೀಜಿಯವರ ಆಗಮನ ಹಾಗೂ ಶುಭಾಶೀರ್ವಾದಗಳಿಗೆ ಭಕ್ತಿಪೂರ್ವಕ ಕೃತಜ್ಞತೆಗಳು ಎಂದರು.
ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಕಣ್ಣೂರು ಚಿಮೇನಿ ಶ್ರೀ ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀನಿವಾಸ ರಾವ್ ಧರ್ಮಸ್ಥಳ ಸ್ವಾಗತಿಸಿ, ವಂದಿಸಿದರು.