
ಆ.15ರಿಂದ ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿ
Friday, July 19, 2024
ಆ.15ರಿಂದ ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿ
ಲೋಕಬಂಧುನ್ಯೂಸ್ ಡೆಸ್ಕ್, ಚಿಕ್ಕಮಗಳೂರು
ಪ್ರಸಿದ್ಧ ಯಾತ್ರಾಕ್ಷೇತ್ರವಾದ ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದ್ದು, ಆಗಸ್ಟ್ 15ರಿಂದ ಶ್ರೀ ಶಾರದಾಂಬಾ ಹಾಗೂ ಜಗದ್ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಿ, ಶೃಂಗೇರಿ ಶ್ರೀಮಠದ ಆಡಳಿತಾಧಿಕಾರಿ ಪಿ.ಎ. ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆ ತೊಟ್ಟು ಬಂದವರಿಗೆ ಶ್ರೀ ಶಾರದಾಂಬಾ ದೇವಸ್ಥಾನದ ಅರ್ಧ ಮಂಟಪದೊಳಗೆ ಪ್ರವೇಶ ಇರುವುದಿಲ್ಲ. ಅಂಥವರು ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನ ಪಡೆಯಬೇಕಾಗುತ್ತದೆ.
ಯಾರಿಗೆ ಯಾವ ಉಡುಗೆ
ಪುರುಷರು ಧೋತಿ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ ರವಿಕೆ, ಸಲ್ವಾರ್ ದುಪಟ್ಟ ಅಥವಾ ಲಂಗ ದಾವಣಿಗಳಂಥ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ದೇವರ ದರ್ಶನ ಮಾಡಬಹುದು.
ಆದೇಶಕ್ಕೆ ವ್ಯಾಪಕ ಬೆಂಬಲ
ಶೃಂಗೇರಿ ಶ್ರೀಮಠದ ಈ ಆದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅರ್ಧಂಬರ್ಧ ಬಟ್ಟೆ ತೊಟ್ಟು ಕೆಲವು ಬುದ್ಧಿಹೀನರು ಪಿಕ್ನಿಕ್ ಸ್ಪಾಟ್ ನಂತೆ ದೇವಾಲಯಗಳನ್ನು ಪ್ರವೇಶಿಸುತ್ತಾರೆ. ಇಂಥ ನಿಯಮಗಳಿಂದ ಅದಕ್ಕೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮಠದ ಗುರು ನಿವಾಸದಲ್ಲಿ ಪಾದಪೂಜೆ, ಭಿಕ್ಷಾವಂದನೆ ಹಾಗೂ ಗುರು ದರ್ಶನ ಸಂದರ್ಭದಲ್ಲಿ ಈ ಹಿಂದಿನಿಂದಲೂ ಈ ನಿಯಮ ಜಾರಿಯಲ್ಲಿದ್ದು, ಆಗಸ್ಟ್ 15ರಿಂದ ಅಲ್ಲಿಯೂ ವಸ್ತ್ರಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.