-->
ಗಂಡನನ್ನು ಕೊಲೆಗೈದ ಪ್ರಕರಣ: ತನಿಖೆಯ ಹಾದಿ ತಪ್ಪಿಸಲು ಯತ್ನ

ಗಂಡನನ್ನು ಕೊಲೆಗೈದ ಪ್ರಕರಣ: ತನಿಖೆಯ ಹಾದಿ ತಪ್ಪಿಸಲು ಯತ್ನ

ಲೋಕಬಂಧು ನ್ಯೂಸ್, ಉಡುಪಿ
ಪ್ರಿಯಕರನೊಂದಿಗೆ ಶಾಮೀಲಾಗಿ ಗಂಡನನ್ನೇ ಕೊಲೆಗೈದ  ಪ್ರಕರಣದಲ್ಲಿ ಆರೋಪಿ ದಿಲೀಪ್ ಹೆಗ್ಡೆ ತಂದೆ ಕಾರ್ಕಳ ಡಿವೈಎಸ್ಪಿ ಅವರ ಹಿಂದೆ ಸೂಟ್ ಕೇಸ್ ಹಿಡಿದು ತಿರುಗಾಡುತ್ತಾ, ಪ್ರಕರಣದ ಹಾದಿ ತಪ್ಪಿಸಲು ಪ್ರಭಾವ ಬೀರುತ್ತಿದ್ದಾರೆ ಎಂದು ಕೊಲೆಯಾದ ಬಾಲಕೃಷ್ಣ ಸಹೋದರ ಪ್ರಕಾಶ್ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ದಿಲೀಪ್ ಹೆಗ್ಡೆಯನ್ನು ರಕ್ಷಿಸಲು ಅನೇಕರು ಪೋಲಿಸ್ ಇಲಾಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪ್ರತಿಮಾ ಅವರ ಮನೆಯವರಿಗೂ ಕರೆಗಳು ಬರುತ್ತಿದ್ದು, ಪ್ರಕರಣದಲ್ಲಿ ಆಸಕ್ತಿ ತೋರಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದರು.


ದಿಲೀಪ್ ಹೆಗ್ಡೆ ತಂದೆ ಹಣದ ಪ್ರಭಾವದಿಂದಾಗಿ ಪ್ರಕರಣವನ್ನು ಸಂಪೂರ್ಣ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ತನಿಖೆಯ ದಾರಿ ತಪ್ಪಿದಲ್ಲಿ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ. ಈಗಾಗಲೇ ಅನೇಕ ಸಂಘಟನೆಗಳು ನ್ಯಾಯ ದೊರಕಿಸಿ ಕೊಡಲು ಬೆಂಬಲ ಸೂಚಿಸಿವೆ ಎಂದರು.


ಕಳೆದ ಮೂರು ತಿಂಗಳಿನಿಂದ ಅಣ್ಣ ಬಾಲಕೃಷ್ಣ ಅವರಿಗೆ ವಿಷವುಣ್ಣಿಸುತ್ತಿದ್ದರು ಎಂಬ ಮಾಹಿತಿ ಇದೆ‌. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಚಿಕಿತ್ಸೆ ನೀಡಿದ ಮಣಿಪಾಲ, ಮಂಗಳೂರು, ಬೆಂಗಳೂರು ವೈದ್ಯರಿಗೆ ಈ ಅಂಶ ಯಾಕೆ ಗಮನಕ್ಕೆ ಬಂದಿಲ್ಲ ಎಂಬ ಬಗ್ಗೆ ಅನುಮಾನವಿದೆ. ವೈದ್ಯರೊಂದಿಗೆ ನಾವ್ಯಾರೂ ಸಂಪರ್ಕದಲ್ಲಿರಲು ಪ್ರತಿಮಾ ಬಿಟ್ಟಿಲ್ಲ. ವೈದ್ಯರು ವಿಷದ ಅಂಶದ ಬಗ್ಗೆ ಆರೋಪಿ ಪ್ರತಿಮಾಳ ಗಮನಕ್ಕೆ ತಂದಿರಲೂಬಹುದು ಎಂದು ಶಂಕೆ ವ್ಯಕ್ತಪಡಿಸಿದರು.


ಆರೋಪಿ ಪತ್ನಿ ಪ್ರತಿಮಾಳ ಸಹೋದರ ಸಂದೀಪ್ ಮಾತನಾಡಿ, ಭಾವ ಬಾಲಕೃಷ್ಣ ನಿಧನದ ಬಳಿಕ
ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗಿತ್ತು. ಆದರೆ, ಸಂಬಂಧಿಕರು ಬರುವಿಕೆಯ ಹಿನ್ನೆಲೆಯಲ್ಲಿ ಕಾಯುತ್ತಿದ್ದಾಗ ಅವರ ಮೃತದೇಹವನ್ನು ಗಮನಿಸಿದೆ. ಗಾಯದ ಗುರುತುಗಳು ಪತ್ತೆಯಾದವು. ಆ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಒತ್ತಾಯ ಮಾಡಿದ ಬಳಿಕ ಪ್ರತಿಮಾ ನಿಜ ಸಂಗತಿಯನ್ನು ಬಾಯಿಬಿಟ್ಟಿದ್ದಾಳೆ ಎಂದರು.


ನನ್ನ ಆರೋಗ್ಯದಲ್ಲೂ ಕೆಲವು ತಿಂಗಳಿನಿಂದ ವ್ಯತ್ಯಾಸ ಉಂಟಾಗುತ್ತಿದೆ. ಸ್ನಾಯು ಸೆಳೆತ, ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ನನಗೂ ನನ್ನ ತಂಗಿ ವಿಷವುಣಿಸಿರುವ ಬಗ್ಗೆ ಅನುಮಾನವಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದಾಗಿ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕುಟುಂಬಿಕರಾದ ತಾರನಾಥ ಕೋಟ್ಯಾನ್, ಸಂಜೀವ ಪೂಜಾರಿ, ಶಶಿರೇಖಾ ಇದ್ದರು.


ಪತ್ರಿಕಾಗೋಷ್ಠಿ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರಿಗೆ ಮನವಿ ಸಲ್ಲಿಸಿದರು.

Ads on article

Advertise in articles 1

advertising articles 2

Advertise under the article