ಕಬಳಿಸಿರುವ ವಕ್ಫ್ ಆಸ್ತಿ ವಶಪಡಿಸಲು ನೋಟಿಸ್ ಕೊಟ್ಟಿದ್ದೆ
Sunday, November 3, 2024
ಲೋಕಬಂಧು ನ್ಯೂಸ್, ಹುಬ್ಬಳ್ಳಿ
ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ಅದನ್ನು ವಶಪಡಿಸಿಕೊಳ್ಳುವಂತೆ ವಕ್ಛ್ ಬೋರ್ಡಿಗೆ ಹೇಳಿದ್ದೆ ವಿನಃ ರೈತರ ಆಸ್ತಿಯನ್ನಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.ನ.3ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಸಚಿವ ಜಮೀರ್ ಅಹ್ಮದ್ ನನ್ನ ಹಳೆಯ ವೀಡಿಯೊ ಬಿಡುಗಡೆ ಮಾಡಿ, ನಾನು ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್ ಬೋರ್ಡಿಗೆ ಹೇಳಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ನಾನು ವಕ್ಫ್ ಸಮಾರಂಭದಲ್ಲಿ ಮಾತನಾಡಿದ್ದೆ. ಆದರೆ, ವಕ್ಫ್ ಬೋರ್ಡಿನ ಯಾವುದೇ ಸಭೆ ಮಾಡಿಲ್ಲ. ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಸಮಿತಿ ವರದಿ ನೀಡಿದೆ.
ಕಾಂಗ್ರೆಸ್ನ ದೊಡ್ಡ ದೊಡ್ಡ ನಾಯಕರು ಮೋಸದಿಂದ ಎಷ್ಟೆಷ್ಟು ವಕ್ಫ್ ಆಸ್ತಿ ನುಂಗಿದ್ದಾರೆ ಎಂದು ಅನ್ವರ್ ಮಾನಿಪ್ಪಾಡಿ ವರದಿಯಲ್ಕಿ ಸ್ಪಷ್ಟವಾಗಿದೆ.
ನಾವು ರೈತರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ರೈತರ ಜಮೀನು ವಶಪಡಿಸಿಕೊಂಡಿಲ್ಲ ಎಂದರು.
ಸಚಿವ ಜಮೀರ್ ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಫ್ ಆಸ್ತಿ ಕಬಳಿಸಿದ್ದಾರೊ ಅದನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.
ಕಣ್ಣೀರೊರೆಸುವ ತಂತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೀರೊರೆಸುವ ತಂತ್ರ. ಈಗ ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೊಟೀಸ್ ಕೊಡುವುದಿಲ್ಲ ಎನ್ನುವುದು ಏನು ಗ್ಯಾರೆಂಟಿ? ಅದರ ಬದಲು ವಕ್ಫ್ ನಲ್ಲಿ ಆಗಿರುವ ಗೆಜೆಟ್ ನೋಟಿಫಿಕೇಶ್ ರದ್ದುಮಾಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು.
ಮುಖ್ಯಮಂತ್ರಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ ಗೌರವ ಇದ್ದರೆ, ಅವರ ಆಸ್ತಿ ಉಳಿಸಬೇಕೆಂದಿದ್ದರೆ ಕೂಡಲೇ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್ ಕೊಡಬಾರದು ಎಂದರು.