ಕರಂಬಳ್ಳಿ ಪ್ರಕರಣ ವ್ಯವಸ್ಥಿತ ಜಿಹಾದ್ ಷಡ್ಯಂತ್ರ
Friday, April 4, 2025
ಲೋಕಬಂಧು ನ್ಯೂಸ್
ಉಡುಪಿ: ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಇತ್ತೀಚೆಗೆ ಜಿನಾ ಎಂಬಾಕೆಯನ್ನು ಅಪಹರಿಸಿದ್ದು, ಬೆದರಿಕೆಯೊಡ್ಡಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರ. ಅಕ್ರಮ್ ಗೆ ಪಿಎಫ್ಐ ನಂಟಿದ್ದು, ಕೇಂದ್ರ ಸರಕಾರ ಎನ್ಐಎ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್. ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿ 9ನೇ ತರಗತಿಯಲ್ಲಿದ್ದಾಗಲೇ ಅಕ್ರಮ್ ಇನ್ಸ್ಟಾಗ್ರಾಮ್ನಲ್ಲಿ ಪರಿಚಯಿಸಿಕೊಂಡು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡು, ಆಶ್ಲೀಲ ಪೋಟೊಗಳನ್ನು ಚಿತ್ರಿಸಿ ಬೆದರಿಸಿದ್ದ. ಆಗ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ನಿರಂತರವಾಗಿ ಆಕೆಯನ್ನು ಹಿಂಬಾಲಿಸಿ, ಅಪಹರಿಸಿಕೊಂಡು ಹೋಗಿದ್ದಾನೆ ಎಂದವರು ಆರೋಪಿಸಿದರು.
ಅಕ್ರಮ್ ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿರುವ ಗರುಡ ಗ್ಯಾಂಗಿನ ಸದಸ್ಯ ಎಂದು ಸಂತ್ರಸ್ತೆಯ ಪೋಷಕರು ತಿಳಿಸಿದ್ದಾರೆ. ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೋಷಕರ ಮಡಿಲಿಗೆ ಮಗಳನ್ನು ಸೇರಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಸುನಿಲ್ ಒತ್ತಾಯಿಸಿದರು.
ಕಳೆದ 3-4 ವರ್ಷದಿಂದ ಯುವತಿಯನ್ನು ನಿರಂತರವಾಗಿ ಹಿಂಬಾಲಿಸಿ ಮದುವೆಯಾಗಲು ಬೆದರಿಸಿ ಅಪಹರಿಸಿದ ಅಕ್ರಮ್ ನನ್ನು ಬಂಧಿಸಿ, ಆತನ ಹಿಂದಿರುವ ಜಾಲದ ತನಿಖೆ ನಡೆಸಬೇಕು. ರಾಜ್ಯ ಗೃಹ ಸಚಿವರು ಹಾಗೂ ಕೇಂದ್ರ ಗೃಹ ಸಚಿವರಿಗೆ ಮನವಿ ನೀಡಿ ಎನ್ಐಎಗೆ ಪ್ರಕರಣ ನೀಡುವಂತೆ ತಿಳಿಸಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಸಂಯೋಜಕ್ ಮನೋಜ್ ಮಲ್ಪೆ ಇದ್ದರು.
ಏ.8ರಂದು ಪ್ರತಿಭಟನೆ
ರಾಜ್ಯ ಸರಕಾರ ಬಜೆಟ್ನಲ್ಲಿ ಮುಸ್ಲಿಮರಿಗೆ ಘೋಷಿಸಿರುವ ವಿಶೇಷ ಮೀಸಲಾತಿ ವಿರೋಧಿಸಿ ರಾಜ್ಯದಾದ್ಯಂತ ವಿಹಿಂಪ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಉಡುಪಿಯಲ್ಲಿ ಏಪ್ರಿಲ್ 8ರಂದು ಪ್ರತಿಭಟನೆ ನಡೆಯಲಿದೆ ಎಂದು ಸುನೀಲ್ ಕೆ.ಆರ್. ಮಾಹಿತಿ ನೀಡಿದರು.