
ದೋಣಿ ದುರಂತ: 10 ಲಕ್ಷ ಪರಿಹಾರಕ್ಕೆ ಆಗ್ರಹ
Friday, May 30, 2025
ಲೋಕಬಂಧು ನ್ಯೂಸ್, ಉಡುಪಿ
ನಾಡದೋಣಿ ಮೀನುಗಾರಿಕೆ ಸಂದರ್ಭದಲ್ಲಿ ಗಾಳಿ ಮಳೆಗೆ ದೋಣಿ ಮಗುಚಿ ಮೃತಪಟ್ಟ ಮೀನುಗಾರರಾದ ಯಶವಂತ ಹಾಗೂ ಕಮಲಾಕ್ಷ ಅವರಿಗೆ ತಕ್ಷಣ ತಲಾ 10 ಲಕ್ಷ ಪರಿಹಾರ ನೀಡುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಈಗಾಗಲೇ ಮೀನುಗಾರಿಕೆ ಸಚಿವ ಮಾಂಕಾಳ ಎಸ್. ವೈದ್ಯ ಅವರಿಗೆ ಮಾಹಿತಿ ನೀಡಿದ್ದು, ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಮೃತ ಮೀನುಗಾರರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಮೂಲಕ ತಕ್ಷಣ 10 ಲಕ್ಷ ಪರಿಹಾರ ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಸಚಿವರು ಪೂರಕವಾಗಿ ಸ್ಪಂದಿಸಿ ಶೀಘ್ರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಯಶಪಾಲ್ ತಿಳಿಸಿದ್ದಾರೆ