ಶಿಸ್ತು ಹಾಗೂ ಸಾರ್ಥಕತೆಯಿಂದ ಜೀವನ ರೂಪಿಸಲು ಕರೆ
Friday, May 30, 2025
ಲೋಕಬಂಧು ನ್ಯೂಸ್, ಬ್ರಹ್ಮಾವರ
ಜನ್ಮದಿಂದಲೇ ಆರಂಭವಾಗುವ ಜೀವನವನ್ನು ಶಿಸ್ತು ಹಾಗು ಸಾರ್ಥಕತೆಯಿಂದ ರೂಪಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅದು ನಿರಂತರ ಪ್ರಯತ್ನದ ಫಲವಾಗಿ ಲಭಿಸುತ್ತದೆ. ವಿದ್ಯಾರಂಭ ಜೀವನ ಹಾಗೂ ಸಮಾಜಕ್ಕೆ ಅತ್ಯವಶ್ಯಕ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.
ಚೇರ್ಕಾಡಿ ಕೇಶವ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ವಿದ್ಯಾರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮನುಷ್ಯರು ಯಾವುದರಲ್ಲಿ ಪ್ರಯತ್ನಶೀಲರಾಗಬೇಕು ಎಂಬ ಪ್ರಶ್ನೆಗೆ ವಿದ್ಯಾಭ್ಯಾಸ, ಸದೌಷಧಿ, ಸಂಪನ್ಮೂಲಗಳ ಸಂಪಾದನೆ ಹಾಗೂ ವಿತರಣೆಯನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು 1,200 ವರ್ಷಗಳ ಹಿಂದೆಯೇ ಉತ್ತರ ನೀಡಿದ್ದಾರೆ. ಅದನ್ನು ಇಂದಿನ ಪೀಳಿಗೆಗೆ ರಾಷ್ಟ್ರೋತ್ಥಾನ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಯುಧವನ್ನು ಪೊಲೀಸರು ಹಾಗೂ ಯೋಧರು ದೇಶ ರಕ್ಷಣೆಗೆ ಬಳಸಿದರೆ, ಭಯೋತ್ಪಾದಕರು ಜನರನ್ನು ಕೊಲ್ಲಲು ಉಪಯೋಗಿಸುತ್ತಾರೆ. ಹಾಗಾಗಿ ವಸ್ತುವಿನ ಸದ್ಬಳಕೆಯ ಅರಿವು ಆಗಬೇಕಾದರೆ ಶಿಸ್ತು ಮತ್ತು ಸಂಸ್ಕಾರ ಮುಖ್ಯ.
ಭಾರತೀಯ ಸಂಸ್ಕೃತಿಯನ್ನು ಪಠ್ಯದಲ್ಲಿ ಅಳವಡಿಸಿಕೊಂಡಿರುವ ಸಂಸ್ಥೆಗಳು ಇನ್ನಷ್ಟು ಸ್ಥಾಪನೆಯಾಗಲಿ ಎಂದು ಆಶಿಸಿದ ಶ್ರೀಗಳು, ಅದ್ಭುತ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಅಗತ್ಯ. ಅಂತೆಯೇ ಶಿಕ್ಷಕರು ಶ್ರದ್ದೆಯಿಂದ ಪಾಠ ಮಾಡಿ, ಮಕ್ಕಳನ್ನು ವಿಶೇಷವಾಗಿ ಸಿದ್ಧಗೊಳಿಸಬೇಕು ಎಂದರು.
ಮಣಿಪಾಲ ಕೆ ಎಮ್.ಸಿ ಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಮಾತನಾಡಿ, ನೌಕರಿಯನ್ನು ಹುಡುಕುವ ವಿದ್ಯಾರ್ಥಿಗಳಾಗದೆ ನೂರಾರು ಜನರಿಗೆ ಉದ್ಯೋಗ ನೀಡುವಂಥವರಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಅಂಥ ಚಿಂತನೆ ನೀಡುವ ಅಗತ್ಯವಿದೆ. ವಿದ್ಯಾರ್ಥಿ ಜೀವನದ ಪ್ರಮುಖ ಹಂತ ಇದಾಗಿದ್ದು, ಈ ಅವಧಿಯಲ್ಲೇ ಮಕ್ಕಳು ಸ್ವತಂತ್ರ ಪ್ರಬುದ್ದ ವಯಸ್ಕರಾಗುವುದು.
ಕಠಿಣ ಪರಿಶ್ರಮ, ಉತ್ಸಾಹ, ಜ್ಞಾನ, ದೃಢತೆ, ಪ್ರಯೋಗಶೀಲ ಗುಣಗಳು ನಮ್ಮಲ್ಲಿರಬೇಕು. ಆಗಲೇ ನಾವೇನಾದರೂ ಸಾಧಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಂಚಾಲನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಋಷಿರಾಜ್ ಉಪಸ್ಥಿತರಿದ್ದರು.
ಚರಣ್ ರಾಜ್ ಸ್ವಾಗತಿಸಿದರು. ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ಞಾ ಕಾಮತ್ ವಂದಿಸಿದರು. ಪ್ರತಿಮಾ, ಮೇಘಾ ಮತ್ತು ಪ್ರಕಾಶ್ ಆಚಾರ್ಯ ನಿರೂಪಿಸಿದರು.