
ಮಕ್ಕಳನ್ನು ಅಂಕ ಗಳಿಕೆಯೊಂದಿಗೆ ಸೇವಾವೃತಿಗಳನ್ನಾಗಿಸಿ
Friday, May 30, 2025
ಲೋಕಬಂಧು ನ್ಯೂಸ್, ಉಡುಪಿ
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನಿಸ್ವಾರ್ಥ ಸೇವೆ ಮಾಡಬೇಕು ಎಂದು ಹೇಳಿದ್ದಾನೆ. ಫಲರಹಿತ ಸೇವೆಯೇ ನಿಜವಾದ ಸೇವೆ. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಅಂಕ ಗಳಿಸುವುದೇ ಪ್ರಧಾನ ವಿಷಯವಾಗಿದೆ. ಅಂಕದ ಜೊತೆಗೆ ಸಮಾಜ ಸೇವೆ, ದೇವರ ಸೇವೆ ಮಾಡುವುದನ್ನೂ ಮಕ್ಕಳಿಗೆ ಕಲಿಸುವ ಅಗತ್ಯ ಇದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವತಿಯಿಂದ 2024- 25ನೇ ಸಾಲಿನ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪ್ರತಿಭಾನ್ವಿತ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಗೆ ಕೃಷ್ಣಮಠ ರಾಜಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಲು ಸಮಾಜ ಸೇವೆಗೂ ಅಂಕ ನೀಡುವ ವ್ಯವಸ್ಥೆ ಬರಬೇಕು. ಒಬ್ಬ ಎಷ್ಟು ಸಮಾಜ ಸೇವೆ ಮಾಡಿದ್ದಾನೆ, ಆತನ ಗುಣ ನಡತೆ ಹೇಗಿದೆ ಎಂಬುದನ್ನು ಪರಿಗಣಿಸಿ ಅಂಕ ನೀಡಬೇಕು. ಆಗ ಆದರ್ಶ ವಿದ್ಯಾರ್ಥಿಗಳು ಹೊರಬರಲು ಸಾಧ್ಯ. ಪಾಶ್ಚಿಮಾತ್ಯ ದೇಶಗಳಲ್ಲಿ ಇಂಥ ವ್ಯವಸ್ಥೆ ಇದೆ. ನಮ್ಮಲ್ಲೂ ಅದು ಜಾರಿಗೆ ಬರಬಬೇಕು ಎಂದರು.
ಎಲ್ಲಿ ಗುಣನಡತೆ, ಸನ್ನಡತೆ ಇಲ್ಲವೋ ಅಲ್ಲಿ ಯಾವ ಸಾಧನೆಗೂ ಬೆಲೆ ಇರುವುದಿಲ್ಲ. ಮಕ್ಕಳು ಗುರು ಹಿರಿಯರಿಗೆ ಗೌರವ ನೀಡುವ, ವಿನಯವಂತರಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಪವಿತ್ರವಾದ ಸಂಸ್ಥೆ. ಅದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದರು.
ಶಾಸಕ ಯಶಪಾಲ್ ಸುವರ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರ್ಯಾಯ ಪುತ್ತಿಗೆ ಮಠದ ವಿದೇಶ ವ್ಯವಹಾರಗಳ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಸಾಂಸ್ಕೃತಿಕ ರಮೇಶ ಭಟ್, ಡಯೆಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಡಿಡಿಪಿಯು ಮಾರುತಿ, ಡಿಡಿಪಿಐ ಕೆ.ಗಣಪತಿ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ. ಪೈ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಆನಂದ್ ಬಿ. ಅಡಿಗ, ಸುಮನ ಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.