
ಉಡುಪಿ ಎಸ್ಪಿ ಅಧಿಕಾರ ಸ್ವೀಕಾರ
Friday, May 30, 2025
ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಶುಕ್ರವಾರ ನಿರ್ಗಮನ ಎಸ್ಪಿ ಡಾ. ಅರುಣ್ ಕೆ. ಅವರಿಂದ ಅಧಿಕಾರ ವಹಿಸಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ಯಾವುದೇ ರೀತಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಲು ಅವಕಾಶ ನೀಡಬಾರದು. ಅಂಥ ಯಾವುದೇ ಘಟನೆಗಳು ಸಂಭವಿಸದಂತೆ ಪೊಲೀಸರೊಂದಿಗೆ ಕೈಜೋಡಿಸಬೇಕು. ಆ ತರಹದ ಮಾಹಿತಿ ಇದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿದರೂ ತಕ್ಷಣ ತಿಳಿಸಿ ಎಂದು ವಿನಂತಿಸಿದರು.
ಈ ಹಿಂದೆ ಎಸ್ಪಿ ಆಗಿದ್ದ ಡಾ.ಅರುಣ್ ಮಾರ್ಗದಲ್ಲಿ ನಡೆಯುವುದಾಗಿ ತಿಳಿಸಿದರು. ದ್ವೇಷ ಭಾಷಣ, ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದ ಸಾಮರಸ್ಯ ಕೆಡಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇರಳದ ತ್ರಿಶೂರ್ ನವರಾದ ಹರಿರಾಮ್ ಶಂಕರ್, ಕಲ್ಲಿಕೋಟೆ ಎನ್ಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016ರಲ್ಲಿ ತಮ್ಮ ಐದನೇ ಪ್ರಯತ್ನದಲ್ಲಿ ಅವರು ಯುಪಿಎಸ್.ಸಿ.ಯಲ್ಲಿ 145ನೇ ರ್ಯಾಂಕ್ ಪಡೆದು ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದರು.
ಬೆಳಗಾವಿ, ಕುಂದಾಪುರ ಉಪವಿಭಾಗದ ಎಸಿಪಿ, ಮಂಗಳೂರಿನಲ್ಲಿ ಡಿಸಿಪಿ, ಹಾಸನದಲ್ಲಿ ಎಸ್ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇದೀಗ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರಿರಾಮ್ ಶಂಕರ್ ಅವರನ್ನು ಡಾ.ಅರುಣ್ ಅವರಿಂದ ತೆರವಾದ ಉಡುಪಿ ಎಸ್ಪಿ ಹುದ್ದೆಗೆ ಸರ್ಕಾರ ನಿಯುಕ್ತಿಗೊಳಿಸಿ ಗುರುವಾರ ಆದೇಶಿಸಿತ್ತು.