.jpg)
ಗೋಗ್ರಾಸ ನೀಡಿ ಹುಟ್ಟುಹಬ್ಬ ಸಂಭ್ರಮಿಸಿದ ಸುಶಾಂತ್ ಕೆರೆಮಠ
Wednesday, June 25, 2025
ಗೋಗ್ರಾಸ ನೀಡಿ ಹುಟ್ಟುಹಬ್ಬ ಸಂಭ್ರಮಿಸಿದ ಸುಶಾಂತ್ ಕೆರೆಮಠ
ವ್ಯಕ್ತಿಯ ಸ್ಮರಣೀಯ ಘಳಿಗೆಗಳಲ್ಲಿ ಆತನ ಹುಟ್ಟುಹಬ್ಬವೂ ಒಂದು. ಯುವ ಪೀಳಿಗೆ ಎತ್ತಲೋ ಸಾಗುತ್ತಿರುವ ಈ ದಿನಮಾನದಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸುಶಾಂತ್ ಕೆರೆಮಠ ತನ್ನ 25ನೇ ಹುಟ್ಟುಹಬ್ಬವನ್ನು ಗೋಮಾತೆಯೊಂದಿಗೆ ಆಚರಿಸಿ ಮಾದರಿಯಾಗಿದ್ದಾರೆ.
ಕೊಡವೂರು ಲಕ್ಷ್ಮೀನಗರದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದ ಗೋಶಾಲೆಯಲ್ಲಿ ಸುಮಾರು 80 ದನ ಕರುಗಳಿದ್ದು, ಅವುಗಳ ಪಾಲನೆ ಪೋಷಣೆಗೆ ಪ್ರತಿನಿತ್ಯ ಸುಮಾರು 13 ಸಾವಿರಕ್ಕೂ ಅಧಿಕ ವೆಚ್ಚ ಬರುತ್ತಿದೆ. ಗೋಶಾಲೆಯಲ್ಲಿರುವ 80 ಶೇ.ದಷ್ಟು ಗೋವುಗಳು ವಯೋವೃದ್ಧವಾಗಿದ್ದು ಹಾಲು ನೀಡವು. ಅವುಗಳ ಲಾಲನೆ ಪಾಲನೆಯೇ ಒಂದು ಸವಾಲು, ಸಾಹಸಮಯ ಕಾರ್ಯ.ಪೇಜಾವರ ಮಠ ನಡೆಸುತ್ತಿರುವ ನೀಲಾವರ ಗೋಶಾಲೆಯಲ್ಲಿ ಸುಮಾರು 1,800 ಗೋವುಗಳಿದ್ದು, ಅವುಗಳ ನಿರ್ವಹಣೆಯೂ ಸವಾಲಾಗಿದೆ.
ಗೋ ಸೇವಾ ಪುಣ್ಯ ಕಾರ್ಯವನ್ನು ಕೈಗೆತ್ತಿಕೊಳ್ಳಲು ಹುಟ್ಟಿಕೊಂಡ ಸಮಾನ ಮನಸ್ಕರ ತಂಡ, ನೀಲಾವರ ಗೋಸೇವಾ ತಂಡ. ನಿರಂತರ ಗೋಗ್ರಾಸ ಸೇವೆ ಮೂಲಕ ಸಾರ್ವಜನಿಕರೂ ಈ ಪುಣ್ಯತಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ.
ಈ ತಂಡದ ಸದಸ್ಯನೂ ಆಗಿರುವ ಸುಶಾಂತ್ ಕೆರೆಮಠ, ತನ್ನ ಜನ್ಮದಿನದ ರಜತ ಮಹೋತ್ಸವದ ಸಂತಸವನ್ನು ಗೋವುಗಳಿಗೆ ಗೋಗ್ರಾಸ ಉಣಬಡಿಸುವ ಮೂಲಕ ಸಂಭ್ರಮಿಸಿದರು.
ಪೇಜಾವರ ಶ್ರೀಪಾದರ ನೇತೃತ್ವದಲ್ಲಿ ಗೋ ಸೇವಾ ತಂಡದ ಕಾರ್ಯಕರ್ತರ ಸಹಾಭಾಗಿತ್ವದಲ್ಲಿ ಬದುಕಿನ ವಿಶೇಷ ದಿನಗಳನ್ನು ಗೋಸೇವೆ ಮಾಡುವ ಮೂಲಕ ಸಂಭ್ರಮಿಸುವುದರೊಂದಿಗೆ ಒಂದಷ್ಟು ಪುಣ್ಯ ಸಂಪಾದನೆಯ ಕಾರ್ಯವೂ ಆಗುತ್ತಿದೆ. ಅದಕ್ಕೆ ಅವಕಾಶ ಕಲ್ಪಿಸಿದ ಪೇಜಾವರ ಶ್ರೀಪಾದರು ಹಾಗೂ ಗೋಸೇವಾ ತಂಡ ಸ್ಮರಣೀಯರು ಎಂದು ಸುಶಾಂತ್ ಕೃತಜ್ಞತೆಯ ಮಾತುಗಳನ್ನಾಡಿದರು.
ಆ ವೇಳೆಗೆ ಅವರಿಗರಿವಿಲ್ಲದಂತೆ ಆನಂದಭಾಷ್ಪ ಸ್ಪುರಣೆಯಾಗಿರುವುದು ಕಾರ್ಯದ ಯಶಸ್ಸಿಗೆ ಹಿಡಿದ ಕನ್ನಡಿಯಂತಿತ್ತು