ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್
Saturday, July 5, 2025
ಲೋಕಬಂಧು ನ್ಯೂಸ್, ಕಾರ್ಕಳ
ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರಕ್ಷವೊಂದರ ಪರ ಪ್ರಚಾರ ಕಾರ್ಯದಲ್ಲಿ ತಲ್ಲೀನರಾದ ಪ್ರಖ್ಯಾತ್ ಬಿ.ಜೆ. ಹಾಗೂ ಹರಿಪ್ರಸಾದ್ ಶೆಟ್ಟಿ ರಾಜಕೀಯ ದಾಳಕ್ಕೆ ಮುಂದಾಗಿ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಈ ಕೃತ್ಯವನ್ನು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಸಂಘದ ತುರ್ತು ಸಭೆ ಬಳಿಕ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದಲ್ಲಿ ಕಾರ್ಕಳ ಎ.ಎಸ್.ಪಿ ಡಾ.ಹರ್ಷ ಪ್ರಯಂವದಾ ಅವರಿಗೆ ಮನವಿ ಸಲ್ಲಿಸಿ ಆರೋಪಿಗಳವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತ ಎಎಸ್ಪಿಆರೋಪಿಗಳ ಪತ್ತೆಗೆ ನಿರ್ದೇಶನ ನೀಡಿದ್ದರು. ಅದರನ್ವಯ ಕಾರ್ಕಳ ಪೊಲೀಸರು ಆರೋಪಿಗಳಾದ ಪ್ರಖ್ಯಾತ್ ಬಿ.ಜೆ. ಹಾಗೂ ಹರಿಪ್ರಸಾದ್ ಶೆಟ್ಟಿ ಅವರನ್ನು ಕಚೇರಿಗೆ ಕರೆಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತ್ರಕರ್ತರ ಕುರಿತ ಅವಹೇಳನಕಾರಿ ಬರಹದ ಬಗ್ಗೆ ವಿವರ ನೀಡಿದ ಆರೋಪಿಗಳು, ನಾವು ಆ ಸಂದರ್ಭದಲ್ಲಿ ಮಾಡಿರುವ ಕಮೆಂಟ್ನಲ್ಲಿ ಅಪಾರ್ಥವಾಗಿರುವ ವಿಷಯ ನಮಗೆ ನಂತರ ತಿಳಿದುಬಂದಿದ್ದು ಅದಕ್ಕಾಗಿ ಕ್ಷಮೆ ಯಾಚಿಸುವುದಾಗಿಯೂ ಇನ್ನು ಮುಂದಕ್ಕೆ ಇಂಥ ಮಾನಹಾನಿಕರ ಪೋಸ್ಟ್ ಮಾಡುವುದಿಲ್ಲ ಎಂದು ತಿಳಿಸಿ, ಈ ಬಾರಿ ಮನ್ನಿಸುವಂತೆ ವಿನಂತಿದ್ದರು.
ಆ ಬಗ್ಗೆ ಆರೋಪಿಗಳಿಂದ ಪೊಲೀಸರು ಮುಚ್ಚಳಿಕೆ ಪಡೆದುಕೊಂಡಿದ್ದರು.
ಮುಂದಕ್ಕೆ ಇಂಥ ಪೋಸ್ಟ್ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಎಎಸ್ಪಿ ಡಾ.ಹರ್ಷಾ ಪ್ರಿಯಂವದಾ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಾಹಿತಿ ನೀಡಿದ್ದಾರೆ.