
ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ
Saturday, July 5, 2025
ಲೋಕಬಂಧು ನ್ಯೂಸ್, ಉಡುಪಿ
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡುಬಂದಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ ಉಡುಪಿ ಸ್ಥಾಪಕ ಸದಸ್ಯ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಕಂಚಿನ ದ್ವಾರಬಂಧ ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಾಗಿದೆ. ಅಡ್ಡ ಪಟ್ಟಿಕೆಯ ಮೇಲೆ ಗಜಲಕ್ಷ್ಮಿಯ ಲಲಾಟ ಬಿಂಬವಿದೆ. ಎಡ-ಬಲದ ಲಂಬ ಪಟ್ಟಿಕೆಗಳ ಮೇಲೆ ಕ್ರಮವಾಗಿ ಅಂಜಲೀ ಮುದ್ರೆಯಲ್ಲಿ ನಿಂತಿರುವ ಆಂಜನೇಯ, ವ್ಯಾಳಿ, ವ್ಯಾಳಿಯ ಮುಖದಿಂದ ಹೊರಟ ಲತಾ ಕೋಷ್ಟಕಗಳ ಮಧ್ಯೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರದ ಶಿಲ್ಪಗಳಿವೆ.
ಉನ್ನತ ಪೀಠದ ಮೇಲೆ ಕುಳಿತಿರುವ ಲಕ್ಷ್ಮಿಯ ಎಡ-ಬಲದಲ್ಲಿ ಆನೆಗಳು ಪವಿತ್ರ ಕಳಸಗಳಿಂದ ಅಭಿಷೇಕ ಮಾಡುತ್ತಿವೆ. ಆನೆಗಳ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ರೇಖಾ ವಿನ್ಯಾಸಗಳು ಅಡ್ಡ ಪಟ್ಟಿಕೆಯ ಮೇಲಿವೆ.
ನಂತರ ಪರುಶುರಾಮ, ರಾಮ, ಕಾಳಿಂಗಮರ್ದನ ಬೆಣ್ಣೆಕೃಷ್ಣ, ಬೆತ್ತಲೆ ಬುದ್ಧ, ಕಲ್ಕಿ ಮತ್ತು ಅಂಜಲೀ ಮುದ್ರೆಯಲ್ಲಿ ನಿಂತಿರುವ ಗರುಡನ ಶಿಲ್ಪಗಳಿವೆ.
ಚಾರಿತ್ರಿಕ ಮಹತ್ವ
ಅನಂತಪದ್ಮನಾಭ ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಕಾಲದ ಶಾಸನವಿದೆ. ಆ ಶಾಸನದಲ್ಲಿ ಚಕ್ರವರ್ತಿಯು, ದೇವಾಲಯದ ಅನಂತ ದೇವರಿಗೆ ನಿತ್ಯವೂ ನಡೆಯುವ ಅಮೃತಪಡಿ, ನಂದಾದೀಪ, ಶ್ರೀಬಲಿ, ನೈವೇದ್ಯ ಮತ್ತು ಪಂಚಪರ್ವಗಳಿಗೆ ಅಪಾರ ಪ್ರಮಾಣದ ಭೂದಾನವನ್ನು ನೀಡುತ್ತಾನೆ ಹಾಗೂ ದೇವಾಲಯದ ಪಾರುಪತ್ಯವನ್ನು ನಡೆಸಲು ಸೂರಪ್ಪಯ್ಯ ಎಂಬ ಅಧಿಕಾರಿಯನ್ನು ನೇಮಿಸಿದ ಆದೇಶವನ್ನು ಶಾಸನ ಒಳಗೊಂಡಿದೆ.
ಸಾಮಾಜ್ಯದ ಆರ್ಥಿಕ ಬಲದಿಂದ ಸೂರಪ್ಪಯ್ಯ ಅಧಿಕಾರಿ ಇಡೀ ದೇವಾಲಯ ಮತ್ತು ತೀರ್ಥ ಮಂಟಪವನ್ನು ಶಿಲಾಮಯವಾಗಿಸಿ ಜೀರ್ಣೋದ್ಧಾರ ಮಾಡುತ್ತಾನೆ. ಬಹುಶಃ ಅದೇ ಸಮಯದಲ್ಲಿ ದೇವಾಲಯದ ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಕಂಚಿನ ದಶಾವತಾರ ಶಿಲ್ಪಗಳ ಪಟ್ಟಿಕೆಯನ್ನೂ ಮಾಡಿಸಲಾಗಿದೆ.
ಕೃಷ್ಣದೇವರಾಯ ಒರಿಸ್ಸಾದ ಗಜಪತಿಗಳ ಮೇಲೆ ದಾಳಿ ಮಾಡಿ, ತನ್ನ ಯಶಸ್ವೀ ದಾಳಿಯ ನೆನಪಿಗಾಗಿ ಒರಿಸ್ಸಾದಿಂದ ಬೆಣ್ಣೆಕೃಷ್ಣನ ಮೂರ್ತಿಯನ್ನು ರಾಜಧಾನಿಗೆ ತರುತ್ತಾನೆ. ಹಂಪಿಯಲ್ಲಿ ಕೃಷ್ಣನಿಗಾಗಿ ಭವ್ಯವಾದ ದೇಗುಲ ನಿರ್ಮಾಣ ಮಾಡುತ್ತಾನೆ. ತದನಂತರ ಬೆಣ್ಣೆಕೃಷ್ಣ ವಿಜಯನಗರ ಸಾಮ್ರಾಜ್ಯದಲ್ಲಿ ಜನಪ್ರಿಯ ದೇವತೆಯಾಗಿ ಕಾಣಿಸಿಕೊಳ್ಳುತ್ತದೆ.
ಈ ದ್ವಾರಬಂಧದ ದಶಾವತಾರ ಶಿಲ್ಪಗಳಲ್ಲಿ ಬೆಣ್ಣೆಕೃಷ್ಣ ಎಂಟನೇ ಅವತಾರವಾಗಿ ಚಿತ್ರಿಸಲ್ಪಟ್ಟಿದ್ದಾನೆ. ಆದ್ದರಿಂದ ಈ ಕಂಚಿನ ದ್ವಾರಬಂಧ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ ಶಿಲ್ಪ ಕಲಾಕೃತಿ ಎಂದು ನಿರ್ಧರಿಸಬಹುದಾಗಿದೆ.
ಒಂಭತ್ತನೇ ಅವತಾರವಾಗಿ ಕಂಡುಬರುವ ಬೆತ್ತಲೆಯಾಗಿ ನಿಂತಿರುವ ಬುದ್ಧನ ಶಿಲ್ಪ ಅತ್ಯಂತ ಕುತೂಹಲಕಾರಿಯಾದದ್ದು. ಇದೇ ರೀತಿಯ ಶಿಲ್ಪ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಭಿತ್ತಿಯಲ್ಲಿ ಕಂಡುಬರುತ್ತದೆ. ಕಂಚಿನ ದ್ವಾರಬಂಧದ ಶಿಲ್ಪಗಳು ಸಂಪೂರ್ಣವಾಗಿ ವಿಜಯನಗರ ಶೈಲಿಯಲ್ಲಿವೆ ಎಂದು ಮುರುಗೇಶಿ ತಿಳಿಸಿದ್ದಾರೆ.