
ಪ್ರಚೋದನಕಾರಿ ಹೇಳಿಕೆ: ಶರಣ್ ಪಂಪ್'ವೆಲ್ ವಿರುದ್ಧ ಕೇಸು ದಾಖಲು
Friday, July 4, 2025
ಲೋಕಬಂಧು ನ್ಯೂಸ್, ಉಡುಪಿ
ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ನಡೆದ ಗೋ ಹತ್ಯೆ ಹಾಗೂ ರಸ್ತೆಯಲ್ಲಿ ದನದ ರುಂಡ ಪತ್ತೆ ಪ್ರಕರಣದ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್'ವೆಲ್ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಶರಣ್ ಪಂಪ್'ವೆಲ್, ಕುಂಜಾಲು ಪ್ರಕರಣದ ಹಿಂದೆ ಮತೀಯ ವಾದಿ ಮುಸ್ಲಿಮರ ಕೈವಾಡ ಇದೆ ಎಂದು ಆರೋಪಿಸಿದ್ದರು.
ಅವರ ಈ ಹೇಳಿಕೆ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉಡುಪಿ ನಗರ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದೆ.
ಕುಂಜಾಲಿನಲ್ಲಿ ನಡೆದ ಗೋ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ಶರಣ್ ಪಂಪ್'ವೆಲ್ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಸುಳ್ಳು ಮಾಹಿತಿ ನೀಡಿದ್ದು, ಇದು ಸಾರ್ವಜನಿಕರಲ್ಲಿ ಗಲಭೆ ಗೊಂದಲ ಉಂಟುಮಾಡಿ, ಧರ್ಮಗಳ ನಡುವೆ ದ್ವೇಷ ಭಾವನೆ ಹುಟ್ಟುಹಾಕುವ ಪ್ರಚೋದನಕಾರಿ ಹೇಳಿಕೆಯಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.