-->
Election: ಕರಡು ಮತದಾರರ ಪಟ್ಟಿ ವಿತರಣೆ

Election: ಕರಡು ಮತದಾರರ ಪಟ್ಟಿ ವಿತರಣೆ

ಉಡುಪಿ, ನ.23 (ಲೋಕಬಂಧು ವಾರ್ತೆ): ಕರ್ನಾಟಕ ನೈಋತ್ಯ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿ ಹಾಗೂ ಅವುಗಳ ಸಿ.ಡಿ.ಯನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷದವರಿಗೆ ವಿತರಿಸಿದರು.
ನೈಋತ್ಯ ಪದವೀಧರರು ಹಾಗೂ ಶಿಕ್ಷಕ ಮತದಾರರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿ ಸೂಚನಾ ಫಲಕಗಳಲ್ಲಿ ಪ್ರಚಾರ ಪಡಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಸೆ. 30ರಿಂದ ನ. 6ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದರು.
ಪದವೀಧರರ ಕ್ಷೇತ್ರಕ್ಕೆ ಒಟ್ಟು  16,478 ಅರ್ಜಿ ಬಂದಿದ್ದು, ಅವುಗಳಲ್ಲಿ 2,402 ಬೇರೆ ಜಿಲ್ಲೆಗೆ ವರ್ಗಾವಣೆಯಾಗಿ 95 ತಿರಸ್ಕೃತಗೊಂಡು ಜಿಲ್ಲೆಯಲ್ಲಿ 13,981 ಅಧಿಕೃತವಾಗಿ ನೋಂದಣಿಯಾಗಿವೆ.


ಶಿಕ್ಷಕರ ಕ್ಷೇತ್ರಕ್ಕೆ 3,014 ಅರ್ಜಿ ಬಂದಿದ್ದು, ಅವುಗಳಲ್ಲಿ 337 ಇತರ ಜಿಲ್ಲೆಗೆ ವರ್ಗಾವಣೆಯಾಗಿ 45 ತಿರಸ್ಕೃತಗೊಂಡು 2,677 ಮತದಾರರ ಹೆಸರು ನೋಂದಣಿಯಾಗಿದೆ ಎಂದರು.


ನ. 23ರಿಂದ ಡಿ. 9ರ ವರೆಗೆ ಈ ಮತದಾರರ ಪಟ್ಟಿಗೆ ಯಾವುದೇ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಬಂದಿರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿ. 25ರಂದು ವಿಲೇವಾರಿ ಮಾಡುವುದರೊಂದಿಗೆ ಮತದಾರರ ಅಂತಿಮ ಪಟ್ಟಿಯನ್ನು ಇದೇ ಡಿ. 30ರಂದು ಪ್ರಕಟಿಸಲಾಗುವುದು ಎಂದರು.


ಈಗಲೂ ಭಾರತೀಯ ಪ್ರಜೆಯಾಗಿ ಸಾಮಾನ್ಯವಾಗಿ ವಾಸಿಸುವ ಇದೇ ನ. 1ಕ್ಕೆ ಮುಂಚೆ ಕನಿಷ್ಟ 3 ವರ್ಷ ಮೊದಲು ದೇಶದ ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ತನ್ನ ಹೆಸರನ್ನು ಪದವೀಧರರ ಮತದಾರರ ಪಟ್ಟಿ ಹಾಗೂ ಚುನಾವಣಾ ಕ್ಷೇತ್ರದ ಸಾಮಾನ್ಯ ಕ್ಷೇತ್ರದಲ್ಲಿ ನಿವಾಸಿಯಾಗಿರುವ ಇದೇ ನ. 1ಕ್ಕೆ ಹಿಂದಿನ 6 ವರ್ಷದಲ್ಲಿ 3 ವರ್ಷವಾದರೂ ರಾಜ್ಯ ಸರಕಾರದ ನಿರ್ದಿಷ್ಟಪಡಿಸಿದ ಪ್ರೌಢಶಾಲೆ ಹಾಗೂ ಅದಕ್ಕಿಂತ ಮೇಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಯಲ್ಲಿ ತೊಡಗಿರುವ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶ ಇದೆ ಎಂದರು.


ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ವಿವಿಧ ಪಕ್ಷದವರಾದ ಕಾಂಗ್ರೆಸ್‌ನ ಹಬೀಬ್ ಅಲಿ ಹಾಗೂ ಪ್ರದೀಪ, ಬಿ.ಜೆ.ಪಿಯ ಚಂದ್ರಶೇಖರ ಪ್ರಭು, ಜೆ.ಡಿ.ಎಸ್ ನ ಜಯಕುಮಾರ್ ಪರ್ಕಳ, ಸಿ.ಪಿ.ಐ.ಎಂನ ಮನೋಹರ್ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article