
C.M. Ibrahim: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅಮಾನತು
Friday, November 17, 2023
ಬೆಂಗಳೂರು, ನ.17 (ಲೋಕಬಂಧು ವಾರ್ತೆ): ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಅಧ್ಯಕ್ಷ ಎಚ್.ಡಿ. ದೇವೇಗೌಡ ಶುಕ್ರವಾರ ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.ಕೇಂದ್ರ ಮಾಜಿ ಸಚಿವ ಇಬ್ರಾಹಿಂಕಾಂಗ್ರೆಸ್ ಎಂ ಎಲ್ ಸಿ ಆಗಿದ್ದರು. ನಂತರ ಪಕ್ಷ ತೊರೆದಿದ್ದ ಅವರು ಜೆಡಿಎಸ್ ಸೇರ್ಪಡೆಯಾಗಿದ್ದು, ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು.
ಆದರೆ ಜೆಡಿಎಸ್, ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಸೇರ್ಪಡೆಗೊಂಡಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಇಬ್ರಾಹಿಂ, ಆ ಕ್ರಮವನ್ನು ವಿರೋಧಿಸಿದ್ದರು. ಅಲ್ಲದೆ, ಮೈತ್ರಿ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ದರು.
ಆದರೆ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಅಧಿಕೃತಗೊಳಿಸಿದ ನಂತರ ದೇವೇಗೌಡ ಇಡೀ ರಾಜ್ಯ ಕಾರ್ಯಕಾರಿಣಿಯನ್ನು ವಿಸರ್ಜಿಸಿದ್ದರು. ಅದರ ಪರಿಣಾಮವಾಗಿ ಇಬ್ರಾಹಿಂ ರಾಜ್ಯ ಪಕ್ಷದ ಘಟಕದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದರು.
ಇದೀಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಸಿ ಎಂ ಇಬ್ರಾಹಿಂ ಅವರನ್ನು ಜೆಡಿಎಸ್ ನಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.