Raghavanka:ಷಡ್ಪದಿ ಜನಕ ರಾಘವಾಂಕ
Friday, November 24, 2023
ಕ್ರಿ ಶ. 12ನೆಯ ಶತಮಾನದ ಕೊನೆಯಲ್ಲಿ ಹಾಗೂ 13ನೆಯ ಶತಮಾನದ ಆರಂಭದಲ್ಲಿ ಜೀವಿಸಿದ್ದ ರಾಘವಾಂಕನ ಹುಟ್ಟೂರು ಹಂಪೆ. ಅವನ ತಂದೆ ಮಹಾದೇವ ಭಟ್ಟ, ತಾಯಿ ರುದ್ರಾಣಿ. 'ರಗಳೆ'ಗಳ ಕವಿ ಹರಿಹರನ ಸೋದರಳಿಯ.ಹರಿಹರನೂ ರಾಘವಾಂಕನೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರು ಎಂದು ಹೆಸರುವಾಸಿಯಾಗಿದ್ದಾರೆ.
ಷಟ್ಪದಿಯ ಬ್ರಹ್ಮ ಎಂದೇ ಖ್ಯಾತನಾದ ರಾಘವಾಂಕ, ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲ ಶೈವ ಕವಿ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿಯೂ ವೈದಿಕ ವಿದ್ಯೆಯಲ್ಲಿಯೂ ಪಾರಂಗತನಾಗಿದ್ದ ಈತ ಉಭಯಕವಿ ಕಮಲರವಿ ಎಂದು ಕೊಂಡಾಡಲ್ಪಟ್ಟಿದ್ದಾನೆ.
ಹರಿಹರ ಕವಿಯೇ ಈತನ ದೀಕ್ಷಾ ಗುರುವೂ ಕಾವ್ಯ ಗುರುವೂ ಅಗಿದ್ದ. ಸೋದರಮಾವನಂತೆಯೇ ಈತನೂ ಹಂಪೆ ವಿರೂಪಾಕ್ಷನ ಅನನ್ಯ ಭಕ್ತ.
ಬಹು ಪ್ರತಿಷ್ಠಿತ ಹರಿಶ್ಚಂದ್ರ ಕಾವ್ಯವನ್ನು ರಚಿಸಿ, ವಿದ್ವಾಂಸರ ಸಮ್ಮುಖದಲ್ಲಿ ಪಂಪಾಪುರದ ದೇವರಾಜನ ಆಸ್ಥಾನದಲ್ಲಿ ವಾಚಿಸಿ ಮಹಾರಾಜನಿಂದ ಕವಿಶರಭಭೇರುಂಡ ಎಂಬ ಬಿರುದಿನೊಂದಿಗೆ ಮನ್ನಣೆಗೆ ಪಾತ್ರನಾದವ.
ಉಭಯ ಭಾಷಾ ಪಂಡಿತನಾದ ರಾಘವಾಂಕ ಪ್ರತಿವಾದಿಗಳೊಂದಿಗೆ ಸಮರ್ಥವಾಗಿ ವಾದಿಸುವ ಛಲ ಮತ್ತು ಅಪೂರ್ವ ಪ್ರತಿಭೆ ಹೊಂದಿದ್ದ.
ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತ್ರೆ, ವೀರೇಶ ಚರಿತೆ, ಶರಭ ಚರಿತೆ ಮತ್ತು ಹರಿಹರ ಮಹತ್ವ ರಾಘವಾಂಕನ ಪ್ರಮುಖ ಕಾವ್ಯಕೃತಿಗಳು. ಅದಲ್ಲದೆ ದೇವಾಂಗ ದಾಸಿಮಯ್ಯನ ಪುರಾಣ ಎಂಬ ಸಾಂಗತ್ಯ ಗ್ರಂಥವನ್ನೂ ರಚಿಸಿದ್ದಾನೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೂತನ ಶಕೆಯನ್ನೇ ಪ್ರಾರಂಭಿಸಿದ ಕವಿ ರಾಘವಾಂಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ.