
ಉಡುಪಿ: ತೀವ್ರ ಮಳೆಗೆ 55 ಕೋಟಿ ನಷ್ಟ
Saturday, July 20, 2024
ಉಡುಪಿ: ತೀವ್ರ ಮಳೆಗೆ 55 ಕೋ. ನಷ್ಟ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಮೇ ತಿಂಗಳಿಂದ ಇದುವರೆಗೆ 55 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಪಾಸ್ತಿ ಹಾನಿ ಮತ್ತು 5 ಜೀವಹಾನಿ ಸಂಭವಿಸಿದೆ. ಈ ನಷ್ಟ ಭರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಜೂನ್- ಜುಲೈ ತಿಂಗಳಲ್ಲಿ 2,369 ಮಿ.ಮೀ. ಮಳೆ ದಾಖಲಾಗಿದೆ. ವಾಡಿಕೆ ಮಳೆ 2,251 ಮೀ.ಮೀ. ಆಗಿದ್ದು ಈ ಬಾರಿ 21 ಶೇ. ಹೆಚ್ಚು ಮಳೆ ಸುರಿದಿದೆ.
ಈ ಬಾರಿಯ ಮಳೆಗಾಲದಲ್ಲಿ 9 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 552 ಮನೆಗಳು ಮತ್ತು 67 ದನದ ಕೊಟ್ಟಿಗೆಗಳು, 39 ಶಾಲಾ ಕಟ್ಟಗಳು ಹಾಗೂ 20 ಅಂಗನವಾಡಿಗಳು ಭಾಗಶಃ ಹಾನಿಗೊಂಡಿವೆ. 270 ಹೆಕ್ಟೇರ್ ತೋಟಗಾರಿಕಾ ಬೆಳೆ ಮತ್ತು 52.94 ಹೆ ಕೃಷಿ ಬೆಳೆ ಹಾನಿಯಾಗಿದೆ.
712.929 ಕಿ.ಮೀ. ಗ್ರಾಮೀಣ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿವೆ. 3,024 ವಿದ್ಯುತ್ ಕಂಬಗಳು, 57.86 ಕಿ.ಮೀ. ವಿದ್ಯುತ್ ತಂತಿ ಹಾಗೂ 20 ಟ್ರಾನ್ಸ್ ಫಾರ್ಮರ್ ಗಳು ಹಾನಿಗೀಡಾಗಿವೆ ಎಂದರು.
ಕಾಪು ತಾಲೂಕಿನ ನಡಿಪಟ್ಣ ಪ್ರದೇಶದಲ್ಲಿ ಸುಮಾರು 100 ಮೀ., ಉಡುಪಿ ತಾಲೂಕಿನ ಹೂಡೆಯಲ್ಲಿ 60 ಮೀ., ಕುಂದಾಪುರ ತಾಲೂಕಿನ ಮಣೂರು ಪಡುಕರೆಯಲ್ಲಿ 100 ಮೀ., ಬೈಂದೂರು ತಾಲೂಕಿನ ಮರವಂತೆಯಲ್ಲಿ 100 ಮೀ. ಸೇರಿ ಒಟ್ಟು 360 ಮೀ.ನಷ್ಟು ಕಡಲುಕೊರೆತ ಸಂಭವಿಸಿದೆ.
ಆ ಭಾಗದಲ್ಲಿ ಇನ್ನೂ ಹೆಚ್ಚಿನ ಕೊರೆತ ತಡೆಯಲು ಕಲ್ಲು ಹಾಕಲು ಸೂಚಿಸಲಾಗಿದೆ. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
5 ಲಕ್ಷ ರೂ. ಪರಿಹಾರ
ಈ ಬಾರಿಯ ಮಳೆಗಾಲದಲ್ಲಿ 5 ಮಂದಿ ಬಲಿಯಾಗಿದ್ದಾರೆ. ಮೇ ತಿಂಗಳಲ್ಲಿ ಸಿಡಿಲಿನಿಂದ 3 ಮಂದಿ ಮೃತಪಟ್ಟಿದ್ದರೆ, ಜೂನ್ ತಿಂಗಳಲ್ಲಿ ಆವರಣ ಗೋಡೆ ಕುಸಿದು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಈ ತಿಂಗಳಲ್ಲಿ ನೆರೆ ನೀರಿನಲ್ಲಿ ಒಬ್ಬ ಕಾರ್ಮಿಕ ಕೊಚ್ಚಿ ಹೋಗಿದ್ದಾನೆ. ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ತಕ್ಷಣ ನೀಡಲಾಗಿದೆ ಎಂದರು.
ಜಿಲ್ಲೆಯ 63 ಪಂಚಾಯತ್ ವ್ಯಾಪ್ತಿಯ 86 ಹಳ್ಳಿಗಳನ್ನು ನದಿ ತೀರ ಎಂದು ಗುರುತಿಸಲಾಗಿದೆ. ಅಲ್ಲಿ 4 ಸಾವಿರ ಕುಟುಂಬದ 16 ಸಾವಿರ ಜನಸಂಖ್ಯೆ ಇದೆ.
ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಅಥವಾ ಈ ಹಿಂದೆ ಪ್ರವಾಹ ಸಂಭವಿಸಿರುವ ಮಾಹಿತಿಯಂತೆ ಪರಿಸ್ಥಿತಿ ಎದುರಿಸಲು ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಪಿಡಿಓ ಅಧ್ಯಕ್ಷರಾಗಿರುತ್ತಾರೆ. 116 ಕಾಳಜಿ ಕೇಂದ್ರಗಳನ್ನು ತೆರೆದು ಸಿದ್ದವಾಗಿಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಮತ್ತು ಜಿಪಂ ಸಿಇಓ ಪ್ರತೀಕ್ ಬಾಯಲ್ ಇದ್ದರು.