.jpg)
ಪರಿಶಿಷ್ಟರ ಅನುದಾನ ಲೂಟಿಯಿಂದ ಚುನಾವಣೆ ಗೆದ್ದ ಕಾಂಗ್ರೆಸ್
Saturday, July 20, 2024
ಪರಿಶಿಷ್ಟರ ಅನುದಾನ ಲೂಟಿಯಿಂದ ಚುನಾವಣೆ ಗೆದ್ದ ಕಾಂಗ್ರೆಸ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ರಾಜ್ಯದಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಲೂಟಿ ಮಾಡಿ ಲೋಕಸಭಾ ಚುನಾವಣೆ ಗೆದ್ದ ಕಾಂಗ್ರೆಸ್ ಸರಕಾರದ ಸಿಎಂ ಸಿದ್ದರಾಮಯ್ಯ, ಭ್ರಷ್ಟಾಚಾರ ಕಣ್ಣ ಮುಂದೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಆರೋಪಿಸಿದ್ದಾರೆ.
ಹಣಕಾಸಿನ ವಿವೇಚನೆಯಿಲ್ಲದೆ ಗ್ಯಾರಂಟಿ ಜಾರಿ, ಬೆಲೆ ಏರಿಕೆ, ದಲಿತರ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ. ದುರ್ಬಳಕೆ ಮಾಡಲಾಗಿದೆ. ಸರಕಾರ ಮುನ್ನಡೆಸುವ ಶಕ್ತಿ ಕಾಂಗ್ರೆಸಿಗಿಲ್ಲ ಎಂದರು.
ಪ್ರತಿಪಕ್ಷಗಳ ಪ್ರತಿಭಟನೆಯ ಹಕ್ಕು ಕಸಿದು ರಾಜ್ಯದಲ್ಲಿ ಎಮರ್ಜೆನ್ಸಿ ಜಾರಿಗೊಳಿಸಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಪ್ರತೀ ಬೂತ್ ನಲ್ಲೂ ಜನಜಾಗೃತಿಯಾಗಬೇಕು ಎಂದರು.
ರಾಹುಲ್ ಗಾಂಧಿ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಿದ್ದಾರೆ. ಮೋದಿ ಆಡಳಿತದಲ್ಲಿ ಭ್ರಷ್ಟಾಚಾರದ ವಾಸನೆಯೂ ಬಂದಿಲ್ಲ. ಹಿಂದೂ ಧರ್ಮ, ಸಂಸ್ಕೃತಿ ಉಳಿಸಿ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಭಾರತ ವಿಶ್ವ ಗುರುವಾಗಲಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಗತ್ತಿನ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ಮೂರನೇ ಸ್ಥಾನಕ್ಕೇರಿ, 2047ರಲ್ಲಿ ವಿಶ್ವ ಗುರುವಾಗಲಿದೆ.
6 ದಶಕದ ಆಡಳಿತದಲ್ಲಿ ಕಾಂಗ್ರೆಸಿನ ಬಡತನವಷ್ಟೇ ನಿವಾರಣೆಯಾಗಿದೆ. ಜನವಿರೋಧಿ, ಭ್ರಷ್ಟ, ದಿವಾಳಿಕೋರ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇರಬಾರದು. ರೈತರು, ಬಡವರು, ಮಹಿಳೆಯರು, ಯುವಜನರ ಸಶಕ್ತೀಕರಣ ಮೋದಿ ಸರಕಾರದ ಆದ್ಯತೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿ, ಮುಂದಿನ ಎಲ್ಲಾ ಚುನಾವಣೆಗಳನ್ನು ಗೆಲ್ಲುವುದೇ ನಮ್ಮ ಗುರಿಯಾಗಬೇಕು ಎಂದರು.
ಶಾಸಕರಾದ ಯಶಪಾಲ್ ಸುವರ್ಣ ಮತ್ತು ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇದ್ದರು.
ಇತ್ತೀಚೆಗೆ ನಿಧನರಾದ ಸಂಘ ಪರಿವಾರ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಿಯದರ್ಶಿನಿ ಮೃತರ ಹೆಸರು ವಾಚಿಸಿದರು.
ಶಂಕರ್ ಅಂಕದಕಟ್ಟೆ ವಂದೇ ಮಾತರಂ ಹಾಡಿದರು. ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ನಿರೂಪಿಸಿದರು. ಉದಯ ಎಸ್. ಕೋಟ್ಯಾನ್ ವಂದಿಸಿದರು.
ಎರಡು ನಿರ್ಣಯ
ಪ್ರಧಾನಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಸಮಾರೋಪ
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಸಕಲೇಶಪುರ ಶಾಸಕ ಹಾಗೂ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಮತ್ತು ರೇಶ್ಮಾ ಉದಯ ಶೆಟ್ಟಿ ಇದ್ದರು.