.jpg)
ಸಿರಿಬಾಗಿಲು ಯಕ್ಷವೈಭವ ಉದ್ಘಾಟನೆ
Thursday, July 18, 2024
ಸಿರಿಬಾಗಿಲು ಯಕ್ಷವೈಭವ ಉದ್ಘಾಟನೆ
ಲೋಕಬಂಧುನ್ಯೂಸ್ ಡೆಸ್ಕ್, ಕಾಸರಗೋಡು
ಇಲ್ಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ 50ರ ಸವಿನೆನಪು ಕಾರ್ಯಕ್ರಮ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಕಲಾಪೋಷಕರ ಸಹಕಾರದೊಂದಿಗೆ ನಿರಂತರ ನಾಲ್ಕು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಉತ್ಸವ ಸಿರಿಬಾಗಿಲು ಯಕ್ಷವೈಭವವನ್ನು ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸಿರಿಬಾಗಿಲು ಪ್ರತಿಷ್ಠಾನ ಕಾಸರಗೋಡಿನಲ್ಲಿ ಯಕ್ಷಗಾನ, ಕನ್ನಡ ಭಾಷೆ ಹಾಗೂ ಸಂಸ್ಖೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರ.
ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ ಎಂದು ಶ್ಲಾಘಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕನ್ನಡದ ಶುದ್ಧ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ನಮ್ಮ ಪುರಾಣ ಕಥೆಗಳು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ಮಾಡುತ್ತಿದೆ.
ಗಡಿನಾಡು ಕಾಸರಗೋಡಿನಲ್ಲಿ ಮಲಯಾಳಿ ಸೆರಗಲ್ಲಿ ಕನ್ನಡ ಉಳಿಸುವ, ಯಕ್ಷಗಾನ ಬೆಳೆಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನ ದೊಡ್ಡ ಸಾಧನೆ ಮಾಡುತ್ತಿದೆ” ಎಂದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಲಾಪೋಷಕ ಹಾಗೂ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಶ್ರೀಗಳಿಂದ ಪ್ರತಿಷ್ಠಾನದ ಗೌರವ ಸದಸ್ಯತ್ವ ಸ್ವೀಕರಿಸಿ, ಓರ್ವ ವೃತ್ತಿ ಕಲಾವಿದನಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಸಾಧನೆ, ಸೇವೆ ಉನ್ನತವಾದುದು.
ಕರ್ನಾಟಕ ಗಡಿ ಪ್ರದೇಶ ಆಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕರ್ನಾಟಕ ಗಡಿ ಪ್ರದೇಶ ಆಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯ ಕಟ್ಟೆ ಭಾಗವಹಿಸಿದ್ದರು.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ಸಿರಿಬಾಗಿಲು ಪ್ರತಿಷ್ಠಾನ ಮುಂದಿನ ಬೆಳವಣಿಗೆಗಾಗಿ ಸದಸ್ಯತ್ವ ನೋಂದಾವಣೆ ಅಭಿಯಾನ ಆರಂಭಿಸಿದೆ ಎಂದರು.
ಜಗದೀಶ ಕೂಡ್ಲು ನಿರ್ವಹಿಸಿದರು. ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.