
ಯುದ್ಧ ಸ್ಮಾರಕ ಅಭಿವೃದ್ಧಿಗೆ ಒಂದು ತಿಂಗಳ ವೇತನ: ಸಚಿವ ಸೋಮಣ್ಣ ಭರವಸೆ
Thursday, July 18, 2024
ಯುದ್ಧ ಸ್ಮಾರಕ ಅಭಿವೃದ್ಧಿಗೆ ಒಂದು ತಿಂಗಳ ವೇತನ: ಸಚಿವ ಸೋಮಣ್ಣ ಭರವಸೆ
ಲೋಕಬಂಧುನ್ಯೂಸ್ ಡೆಸ್ಕ್, ಮಂಗಳೂರು
ಇಲ್ಲಿನ ಕದ್ರಿ ಹಿಲ್ಸ್ ಯುದ್ಧ ಸ್ಮಾರಕದ ಅಭಿವೃದ್ಧಿಗೆ ತನ್ನ ಒಂದು ತಿಂಗಳ ವೇತನ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಕದ್ರಿ ಹಿಲ್ಸ್ ಯುದ್ಧ ಸ್ಮಾರಕದ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಕ್ಷಣ ಒಂದು ತಿಂಗಳ ವೇತನ ಮೊತ್ತದ ಚೆಕ್ ಕಳುಹಿಸುವುದಾಗಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರಿಗೆ ತಿಳಿಸಿದರು.
ವಿಜಯಪುರ, ಬೆಳಗಾವಿ ಹೊರತುಪಡಿಸಿದರೆ ಮಂಗಳೂರಿನಲ್ಲಿ ಇಂಥ ಸ್ಮಾರಕ ಇದೆ. ದೇಶದ ಗಡಿ ಕಾಯುವ ವೇಳೆ ಅನಿರೀಕ್ಷಿತವಾಗಿ ಸಾವನ್ನಪ್ಪಿದ ಯೋಧರ ಅನೇಕ ಕುಟುಂಬಗಳು ಇಂದಿಗೂ ನೋವಿನಲ್ಲಿವೆ. ದೇಶಕ್ಕಾಗಿ ಜೀವ ಸಮರ್ಪಣೆ ಮಾಡಿದ ಯೋಧರ ಕುಟುಂಬದವರು ಸ್ಮಾರಕಗಳಿಗೆ ಬಂದಾಗ ಅವರಿಗೆ ನೆಮ್ಮದಿ ಸಿಗುತ್ತದೆ.
ಈ ಸ್ಮಾರಕವನ್ನು ಚೆನ್ನಾಗಿ ಅಭಿವೃದ್ಧಿ ಮಾಡಬೇಕು. ಅದಕ್ಕೆ ಹೆಚ್ಚುವರಿ ಜಾಗ ಅಗತ್ಯವಿರುವ ಬಗ್ಗೆ ಹೇಳಿದ್ದು, ಇದು ಕೂಡಾ ಸಿಗುವಂತಾಗಬೇಕು. ಇಂಥ ಕೆಲಸ ಮಾಡುವಾಗ ವಿಶಾಲ ಮನೋಭಾವ ತೋರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಯುದ್ಧ ಸ್ಮಾರಕ ಅಭಿವೃದ್ಧಿಗೆ ನೆರವು ನೀಡುವುದಾಗಿ ಘೋಷಿಸಿದರು.
ಶಾಸಕ ವೇದವ್ಯಾಸ ಕಾಮತ್ ಪ್ರಯತ್ನದಿಂದ ಎಸ್ಎಫ್ಸಿ ವಿಶೇಷ ಅನುದಾನ 25 ಲಕ್ಷ ರೂ. ದೊರೆತಿದ್ದು, ಈ ಅನುದಾನದಲ್ಲಿ ಯುದ್ಧ ಸ್ಮಾರಕ ಅಭಿವೃದ್ಧಿಪಡಿಸಲಾಗುವುದು.
ಹೆಚ್ಚುವರಿ ಹಣ ಅಗತ್ಯವಿದ್ದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಭರಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಹರೀಶ್ ಪೂಂಜ, ಮಾಜಿ ಯೋಧರ ಸಂಘದ ಅಧ್ಯಕ್ಷ ಶ್ರೀಕಾಂತ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಇದ್ದರು.