ಬೃಹತ್ ಗುಂಡಿ ಮುಚ್ಚಿಸಲು ವಿನೂತನ ಪ್ರತಿಭಟನೆ
Wednesday, July 24, 2024
ಬೃಹತ್ ಗುಂಡಿ ಮುಚ್ಚಿಸಲು ವಿನೂತನ ಪ್ರತಿಭಟನೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಕ್ರೇನ್ ನ ಬುಟ್ಟಿಯೊಳಗೆ ನಿಂತ ವ್ಯಕ್ತಿ ತಮಟೆ ಬಡಿಯುತ್ತಾ ಎಚ್ಚರಿಕೆ ಫಲಕ ಹಿಡಿದು ನೀರು ತುಂಬಿರುವ ಆಳೆತ್ತರದ ಗುಂಡಿಯ ಸನಿಹಕ್ಕೆ ಇಳಿಯುತ್ತಿದ್ದ ದೃಶ್ಯ ನೋಡುತ್ತಿದ್ದವರಿಗೆ ಇದೇನು ಎಂಬ ಪ್ರಶ್ನೆ ಮೂಡಲಾರಂಭಿಸಿತ್ತು.
ಮಂಗಳವಾರ ಬೆಳಗ್ಗೆ ನಗರದ ಕೆ.ಎಮ್. ಮಾರ್ಗದಲ್ಲಿರುವ ಉದ್ಯಮಿ ಬಿ.ಆರ್. ಶೆಟ್ಟಿ
ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ತೆಗೆದಿರುವ ಬೃಹತ್ ಗುಂಡಿ ಮುಚ್ಚುವಂತೆ ಆಗ್ರಹಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆ ನಡೆಸಿದರು.
ಮನೋವೈದ್ಯ ಡಾ.ಪಿ.ವಿ. ಭಂಡಾರಿ ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದು ಬೆಂಬಲಿಸಿದರು.
ಕ್ರೇನ್ ನ ಬುಟ್ಟಿಯೊಳಗೆ ನಿಂತು ಎಚ್ಚರಿಕೆ ಫಲಕ ಇಟ್ಟುಕೊಂಡು ತಮಟೆ ಹೊಡೆಯುತ್ತಾ, ಆಳೆತ್ತರ ಗುಂಡಿಗೆ ಸನಿಹಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಎಚ್ಚರಿಕೆಯ ಫಲಕವನ್ನು ನೀರಿನಲ್ಲಿ ತೇಲಿಬಿಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತ್ಯಾನಂದ ಒಳಕಾಡು, ಬಿ.ಆರ್. ಶೆಟ್ಟಿ ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ತೆಗೆದಿದ್ದ ಬೃಹತ್ ಗುಂಡಿಯಲ್ಲಿ ಮಳೆ ನೀರು ತುಂಬಿ ಕೃತಕ ಈಜುಕೊಳ ಸೃಷ್ಟಿಯಾಗಿದೆ. ಅದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಆತಂಕ ಮತ್ತು ಬಹುಮಹಡಿ ಕಟ್ಟಡಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ.
ಅಲ್ಲದೆ ಈ ಗುಂಡಿಯೂ ಡೆಂಗ್ಯೂ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಆದ್ದರಿಂದ ತಕ್ಷಣ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸಿದರು.
ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಹಾಜಿ ಅಬ್ದುಲ್ ಸಾಹೇಬ್ ಸರಕಾರಕ್ಕೆ ಜಾಗವನ್ನು ದಾನ ನೀಡಿರುವುದು ಗುಂಡಿ ತೆಗೆಯಲು ಅಲ್ಲ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇದನ್ನು ಖಾಸಗಿಯವರಿಗೆ ನೀಡಲಾಗಿತ್ತು. ಆದರೆ, ಕಾರಣಾಂತರದಿಂದ ಜಾಗದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಿಲ್ಲ. ಕಳೆದ ಆರು ವರ್ಷದಿಂದ ಇದು ನಿಷ್ಪ್ರಯೋಜಕವಾಗಿದೆ.
ಆದರೆ, ಈಗ ಈ ಜಾಗ ಸರಕಾರದ ಅಧೀನದಲ್ಲಿ ಇದೆಯೋ, ಖಾಸಗಿಯವರ ಒಡೆತನದಲ್ಲಿ ಇದೆಯೋ ತಿಳಿದಿಲ್ಲ.
ಜಿಲ್ಲಾಡಳಿತ, ಜಿಲ್ಲಾಧಿಕಾರಿ ತಕ್ಷಣ ಅಪಾಯಕಾರಿ ಗುಂಡಿಯನ್ನು ಪರಿಶೀಲಿಸಬೇಕು. ತುರ್ತು ಕ್ರಮ ಕೈಗೊಳ್ಳಬೇಕು.
ಇಲ್ಲಿ ಸೊಳ್ಳೆ ಉತ್ಪತ್ತಿಯಾಗಿ ನಾಗರಿಕರ ಆರೋಗ್ಯದ ಮೇಲೂ ತೊಂದರೆ ಆಗುತ್ತಿದೆ. ಇದನ್ನೆಲ್ಲ ನೋಡಿಕೊಂಡು ಸರಕಾರ ಸುಮ್ಮನೆ ಇರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಪ್ರಾಣದ ಪರಿವೆ ಇಲ್ಲದೆ ಪ್ರತಿಭಟನೆ
ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕ್ರೇನ್ ಮೂಲಕ ಪ್ರತಿಭಟನೆ ನಡೆಸುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಈಜು ಪಟುಗಳು, ಅಗ್ನಿಶಾಮಕ ದಳ, ಪೋಲಿಸ್ ಇಲಾಖೆ, ಆ್ಯಂಬುಲೆನ್ಸ್ ಗಳನ್ನು ಸ್ಥಳದಲ್ಲಿ ಸಿದ್ದತೆ ಮಾಡಿಟ್ಟುಕೊಳ್ಳಲಾಗಿತ್ತು.