ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಮೋಸ
Wednesday, July 24, 2024
ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಮೋಸ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಎಸ್.ಸಿ, ಎಸ್.ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರಾಜ್ಯ ಸರಕಾರ ತಡೆಹಿಡಿದು, ಅವೈಜ್ಞಾನಿಕ ಮಾನದಂಡ ವಿಧಿಸಿದೆ. ಇದು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಮೋಸ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ.) ಕಿಡಿಕಾರಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಡಿದ ಸಂಘಟನೆಯ ರಾಜ್ಯ ಸಂಚಾಲಕ ಶೇಖರ್ ಹಾವಂಜೆ, ಎಸ್.ಸಿ/ಎಸ್.ಟಿ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 75 ಶೇ. ಅಂಕ ಪಡೆದಿರಬೇಕು ಹಾಗೂ ಕುಟುಂಬದ ಆದಾಯ 6 ಲಕ್ಷ ಮೀರಬಾರದು ಎಂದು ಆದೇಶವನ್ನು ಸರಕಾರ ಹೊರಡಿಸಿದೆ. ಈ ಆದೇಶವನ್ನು ಕೂಡಲೇ ರದ್ದು ಮಾಡಬೇಕು.
ಅಲ್ಲದೇ ವಿದೇಶದಲ್ಲಿ ಪಿ.ಎಚ್.ಡಿ ಹಾಗೂ ಉನ್ನತ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಕತ್ತರಿ ಹಾಕಿದೆ. ಈ ಯೋಜನೆಯನ್ನೂ ಮುಂದುವರಿಸಬೇಕು ಎಂದವರು ಒತ್ತಾಯಿಸಿದರು.
ಬಡ ಎಸ್.ಸಿ/ಎಸ್.ಟಿ ಸಮುದಾಯದ ವಿರೋಧಿ ಸರಕಾರ ಇದಾಗಿದ್ದು, ಸಮುದಾಯದ ಅಭಿವೃದ್ಧಿಗೆ
ಮೀಸಲಿಟ್ಟ ಹಣವನ್ನು ವರ್ಗಾವಣೆ ಮಾಡಿಕೊಂಡು ಅನ್ಯಾಯ ಎಸಗಿದೆ.
ಪ.ಜಾತಿ/ಪಂಗಡದವರನ್ನು ಸುಲಭವಾಗಿ ವಂಚಿಸಬಹುದು ಎಂದು ಈ ಸರಕಾರಕ್ಕೆ ತಿಳಿದಿದೆ. ಸಿಎಂ ಸಿದ್ದರಾಮಯ್ಯ ತಕ್ಷಣ ಸಮುದಾಯದ ಹಣವನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.
ಸರಕಾರ ಎಸಗಿರುವ ಅನ್ಯಾಯಗಳ ವಿರುದ್ದ ಜು.25ರಂದು ಬೆಂಗಳೂರಿನಲ್ಲಿ ರಾಜ್ಯ ಸಮಿತಿ
ಸಭೆಯಲ್ಲಿ ನಿರ್ಣಯ ಕೈಗೊಂಡು, ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು, ದಸಂಸ ಭೀಮವಾದ (ರಿ) ಜಿಲ್ಲಾ ಸಂಚಾಲಕ ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಸಮಿತಿ ಸದಸ್ಯೆ ಸುಜಾತ ಎಸ್.ಹಾವಂಜೆ ಉಪಸ್ಥಿತರಿದ್ದರು.