ಸಾಹಿತ್ಯ ಸಮ್ಮೇಳನ ನಾಡು ನೆಲದ ಸಂಸ್ಕೃತಿಯ ಪ್ರತಿಬಿಂಬವಾಗಲಿ
Friday, July 19, 2024
ಸಾಹಿತ್ಯ ಸಮ್ಮೇಳನ ನಾಡು ನೆಲದ ಸಂಸ್ಕೃತಿಯ ಪ್ರತಿಬಿಂಬವಾಗಲಿ
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ನಾಡು, ನುಡಿ ಹಾಗೂ ನೆಲದ ಸಂಸ್ಕೃತಿ ಪ್ರತಿಬಿಂಬಿಸುವ ಜೊತೆಗೆ ಹೆಚ್ಚು ಅರ್ಥಪೂರ್ಣ, ವೈವಿಧ್ಯಮಯವಾಗಿರುವಂತೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್. ಚಲುವರಾಯಸ್ವಾಮಿ ಹೇಳಿದರು.
ವಿಕಾಸ ಸೌಧದ ತನ್ನ ಕಚೇರಿ ಕೊಠಡಿಯಲ್ಲಿ ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ ಕುರಿತು ಸಭೆ ನಡೆಸಿ,ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳನ್ನು ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಸಮ್ಮೇಳನ ಆಯೋಜಿಸುವಂತೆ ಸಲಹೆ ನೀಡಿದರು.
ಎಲ್ಲಾ ಸಮಿತಿಗಳಲ್ಲಿ ಸ್ಥಳೀಯ ಶಾಸಕರಿಗೆ ನೇತೃತ್ವ ವಹಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸೇರಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಸಂಘಟನೆಗಳನ್ನೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ನಿರ್ದೇಶನ ನೀಡಿದರು.
ರಾಜ್ಯದ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ. ಸಮಿತಿಗಳ ನಡುವೆ ಯಾವುದೇ ಗೊಂದಲವಿಲ್ಲದಂತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು.
ಇದು ಇಡೀ ರಾಜ್ಯದ ನುಡಿಹಬ್ಬ. ಜಿಲ್ಲೆಯಾದ್ಯಂತ ಸಂಭ್ರಮ ಸಡಗರ ಇರುವಂತೆ ಎಲ್ಲಾ ವರ್ಗದವರನ್ನು ಸೇರಿಸಿ ಸಮ್ಮೇಳನ ಸಂಘಟಿಸಿ ಎಂದರು.
ಸಮ್ಮೇಳನದ ಯಶಸ್ವಿ ಸಂಘಟನೆಗೆ ವಿವಿಧ ಸಮಿತಿಗಳ ರಚನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವೇದಿಕೆ ನಿರ್ಮಾಣ, ನಿರ್ವಹಣೆ, ಶಿಷ್ಟಾಚಾರ ಪಾಲನೆ , ಮೆರವಣಿಗೆ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮ, ಗೋಷ್ಠಿ ಆಯೋಜನೆ, ವಸತಿ, ಕುಡಿಯುವ ನೀರು, ಸ್ವಚ್ಛತೆ, ಊಟೋಪಚಾರ, ಹಣಕಾಸು, ಪ್ರಚಾರ, ಪುಸ್ತಕ ಮಳಿಗೆ, ಸ್ಮರಣ ಸಂಚಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾl ಕುಮಾರ ಸಮ್ಮೇಳನದ ಸಂಘಟನೆ ಕುರಿತು ಮಾಹಿತಿ ಹಾಗೂ ಅಭಿಪ್ರಾಯ, ಸಲಹೆ ನೀಡಿದರು.
ಶಾಸಕರಾದ ರಮೇಶ್ ಬಾಬು, ಬಂಡಿ ಸಿದ್ದೇಗೌಡ, ಪಿ.ಎಂ. ನರೇಂದ್ರ ಸ್ವಾಮಿ ಮತ್ತು ಕೆ.ಎಂ. ಉದಯ್, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಲಾಂಛನ ರಚಿಸಿದ ಕಲಾವಿದ ಶಂಕರ್, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಡಾ. ಪಟೇಲ್ ಪಾಂಡು, ನೇ.ಭ. ರಾಮಲಿಂಗ ಶೆಟ್ಟಿ, ಮೀರಾ ಶಿವಕುಮಾರ್, ಡಾ. ಪದ್ಮಿನಿ ನಾಗರಾಜ್, ಎಂ.ಎಸ್. ಶ್ರೀನಿವಾಸಮೂರ್ತಿ ಇದ್ದರು.