-->
ಸಿಸ್ಟರ್ ಡೊನಾಲ್ಡಾ ಪಾಯಸ್ ನಿಧನ

ಸಿಸ್ಟರ್ ಡೊನಾಲ್ಡಾ ಪಾಯಸ್ ನಿಧನ

ಲೋಕಬಂಧು ನ್ಯೂಸ್, ಕಾರ್ಕಳ
ಜೀವನ್ ವೆಲ್ಫೇರ್ ಟ್ರಸ್ಟ್ ಕಾರ್ಕಳ ಸಂಸ್ಥಾಪಕಿ, ಕಾರ್ಕಳ ಅರುಣೋದಯ ವಿಶೇಷ ಶಾಲಾ ಮುಖ್ಯಸ್ಥೆ, ಸುಮಾರು 35 ವರ್ಷಗಳಿಂದ ವಿಶೇಷ ಮಕ್ಕಳ ನಿಸ್ವಾರ್ಥ ಸೇವೆ ಸಲ್ಲಿಸಿದ ಜಿಲ್ಲಾ ರಾಜ್ಯೋತ್ಸವ ಹಾಗೂ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಅರುಣೋದಯ ಸಿಸ್ಟರ್ ಎಂದೇ ಜನಜನಿತರಾಗಿದ್ದ ಡೊನಾಲ್ಡಾ ಪಾಯಸ್ (81) ಅಲ್ಪಕಾಲದ ಅಸೌಖ್ಯದಿಂದ ನ.7ರಂದು ನಿಧನರಾದರು.
ಬಂಟ್ವಾಳ ತಾಲೂಕು ಕರಿಂಗಾನ ಗ್ರಾಮದವರಾದ ಅವರು,1971ರಲ್ಲಿ ಕನ್ಯಾಶ್ರೀ ಪಟ್ಟ ಸ್ವೀಕರಿಸಿದರು.


ಮಾರ್ಸೆಲಿನ್ ಪಾಯ್ಸ್ ಆಗಿದ್ದ ಅವರು ಸಿಸ್ಟರ್ ಡೊನಾಲ್ಟಾ ಪಾಯ್ಸ್ ಆದರು. 1968ರಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿ ಸರ್ಕಾರದಿಂದ ನೇಮಕಗೊಂಡು ರೋಸಾ ಮಿಸ್ತಿಕಾ ಹೈಸ್ಕೂಲ್, ಲೊಯೊಲಾ ಹೈಸ್ಕೂಲ್, ಮೈಸೂರಿನ ಕೆ.ಆರ್. ನಗರದ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಅಜೆಕಾರು ಜ್ಯೋತಿ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದರು.


ಅದೇ ವೇಳೆಗೆ ಸಮಾಜದಲ್ಲಿರುವ ದಿವ್ಯಾಂಗ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕೆಂಬ ಅನುಕಂಪದೊಂದಿಗೆ ಅಜೆಕಾರು ಜ್ಯೋತಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕಾರ್ಕಳ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ 2000ನೇ ಸಾಲಿನಲ್ಲಿ ಜೀವನ್ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿ ಕಾರ್ಕಳದಲ್ಲಿ ಬಾಡಿಗೆ ಮನೆಯೊಂದರಲ್ಲಿ 4 ಮಂದಿ ಬುದ್ದಿಮಾಂದ್ಯ ಮಕ್ಕಳನ್ನು ಒಟ್ಟುಗೂಡಿಸಿ, ಅಂಥ ಮಕ್ಕಳ ತರಬೇತಿಗಾಗಿ ಅರುಣೋದಯ ವಿಶೇಷ ಶಾಲೆ ಆರಂಭಿಸಿದರು.


ದಿನ ಕಳೆದಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂತು. ನಂತರ ಅಲ್ಲಿಂದ ಮಗ್ದಾಲಿನಾಕ್ಕೆ ವರ್ಗಾವಣೆಗೊಂಡು ಅಲ್ಲಿ 3 ವರ್ಷ ಶಾಲೆ ನಡೆಸಿದರು. ಮಗ್ದಲಿನಾ ಶಾಲೆ ನಡೆಸುತ್ತಿರುವಾಗಲೇ ಮಾಳದಲ್ಲಿ ಆರುಣೋದಯ ವಿಶೇಷ ಶಾಲೆಯ ಶಾಖೆ ತೆರೆದರು. ಆದರೆ, ಮಗ್ದಲಿನಾ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದುದರಿಂದ ಮಾಳದಲ್ಲಿರುವ ಶಾಖೆಯನ್ನು ಮುಂದುವರೆಸಲು ಅಸಾಧ್ಯವಾಯಿತು.


2000ನೇ ವರ್ಷದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿ ಬೆಥನಿ ಸಂಸ್ಥೆ ತ್ಯಜಿಸಿ ವೈಯಕ್ತಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು.


ತನ್ನ ಪಿಂಚಣಿ ಹಣ ಮತ್ತು ಕೆಲವು ದಾನಿಗಳ ಸಹಾಯದಿಂದ ಆ ಜಾಗದಲ್ಲಿ ಕಟ್ಟಡ ಕಟ್ಟಲು ಆರಂಭಿಸಿದರು. 2004ರಲ್ಲಿ ಅರುಣೋದಯ ವಿಶೇಷ ಶಾಲೆಯ ಕಟ್ಟಡ ಪೂರ್ಣಗೊಂಡು ಮಗ್ದಲಿನಾದಿಂದ ವಿಕಲಚೇತನ ಮಕ್ಕಳು ಈ ಶಾಲೆಗೆ ವರ್ಗಾವಣೆಗೊಂಡರು.


ಅಂದಿನಿಂದ ಇದುವರೆಗೆ ಈ ಶಾಲೆಯನ್ನು ಸಿಸ್ಟರ್ ಡೊನಾಲ್ಟಾ ಪಾಯ್ಸ್ ಶ್ರಮ ಮತ್ತು ಜವಾಬ್ದಾರಿಯಿಂದ ಉಚಿತವಾಗಿ ನಡೆಸಿಕೊಂಡು ಬಂದಿದ್ದು ತನ್ನ ಜೀವನವನ್ನೇ ವಿಶೇಷ ಮಕ್ಕಳ ಸೇವೆಗಾಗಿ ಮುಡಿಪಾಗಿಟ್ಟಿದ್ದರು.


ಸಂತಾಪ
ಡೊನಾಲ್ಡಾ ಪಾಯಸ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಎಜುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಜೈನ್, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್, ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಸದಸ್ಯ ವಿವೇಕಾನಂದ ಶೆಣೈ, ಸಮಾಜ ಸೇವಕಿ ಕಾಂತಿ ಶೆಟ್ಟಿ , ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ ಕಾಮತ್, ಪುರಸಭಾ ಮಾಜಿ ಅಧ್ಯಕ್ಷರಾದ ಸುಬಿತ್ ಎನ್. ಆರ್. ಮತ್ತು ರೆಹಮತ್ ಎನ್. ಶೇಖ್, ಪುರಸಭಾ ಸದಸ್ಯೆ ನಳಿನಿ ಆಚಾರ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article