ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆ ವಿಳಂಬ: ಫೆ.22ರಿಂದ ಧರಣಿ
Friday, February 21, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.21: ಬ್ರಹ್ಮಾವರದ ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22ರ ಅವಧಿಯಲ್ಲಿ 14 ಕೋಟಿ ರೂ. ಲಪಟಾಯಿಸಲಾಗಿದೆ ಎಂಬ ಆರೋಪದ ವಿರುದ್ಧದ ತನಿಖೆ ವಿಳಂಬವಾಗುತ್ತಿದೆ. ಅದನ್ನು ಖಂಡಿಸಿ ಫೆ.22 ರಂದು ಬೆಳಗ್ಗೆ 9.30ರಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗೇಟಿನ ಬಳಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ, ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನ ಕನಿಷ್ಠ 25 ಮಂದಿಯಂತೆ ಮೂರು ತಿಂಗಳು ಅಹೋರಾತ್ರಿ ಧರಣಿ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ದ.ಕ ಜಿಲ್ಲಾ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತ ಪರ ಸಂಘಟನೆಗಳು, ಸಹಕಾರಿ ಕ್ಷೇತ್ರದ ಸಹಕಾರಿ ಪ್ರಮುಖರು, ಪಂಚಾಯತ್'ರಾಜ್ ಒಕ್ಕೂಟದ ಪ್ರತಿನಿಧಿಗಳು, ಪ್ರಾಂತೀಯ ರೈತ ಸಂಘ ಬೆಂಬಲಿಸಿ, ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ನ್ಯಾಯಾಲಯದ ಆದೇಶದಂತೆ ಬ್ರಹ್ಮಾವರ ಠಾಣೆಯಲ್ಲಿ 2023ರ ಅ.25ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳು ಆರೋಪಿಗಳಾಗಿರುವುದರಿಂದ ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿ ಪಡೆಯಲು 2024ರ ಆ.14ರಂದು ಪೋಲಿಸ್ ಇಲಾಖೆ, ರಾಜ್ಯ ಸರಕಾರದ ಒಳಾಡಳಿತ ಇಲಾಖೆಯನ್ನು ಕೋರಿದ್ದರೂ ಇದುವರೆಗೆ ಅಲ್ಲಿಂದ ಪೂರ್ವಾನುಮತಿ ದೊರೆತಿಲ್ಲ. ಇದು ಸರಕಾರದ ಮೃದು ಧೋರಣೆ ಎಂದು ಕಿಡಿಕಾರಿದರು.
ಪ್ರತೀ ಹಂತದಲ್ಲೂ ತನಿಖೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಪ್ರತಿರೋಧ ತೋರಿಸುವ ನಿಟ್ಟಿನಲ್ಲಿ ಮತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರುವವರನ್ನು ಸಮರ್ಪಕವಾದ ತನಿಖೆಗೆ ಒಳಪಡಿಸಿ, ಅವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖಂಬದಕೋಣೆ ಸಹಕಾರಿ ಪತ್ತಿನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರೈತ ಮುಖಂಡರಾದ ಸದಾನಂದ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಭೋಜ ಕುಲಾಲ್ ಇದ್ದರು.